ಮೈಸೂರು: ಕಳೆದ ವರ್ಷದ ಚಾಂಪಿಯನ್ ತಮಿಳುನಾಡಿನ ಎಂ. ಕುನಾಲ್ ಶುಕ್ರವಾರ ಮೈಸೂರಿನಲ್ಲಿ ಮುಕ್ತಾಯವಾದ 3ನೇ ಎಂಡಿಸಿಎ ಅಖಿಲ ಭಾರತ ಫಿಡೆ ರೇಟಿಂಗ್ ಚೆಸ್ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡರು.
ಮಧುರೈನ ಮುರಳೀಧರ್ ಕುನಾಲ್ ಹತ್ತು ಸುತ್ತುಗಳ ಪೈಕಿ ಒಟ್ಟು 9 ಪಾಯಿಂಟ್ ಗಳಿಸಿ ಪ್ರಶಸ್ತಿ ಮತ್ತು 25 ಸಾವಿರ ರೂಪಾಯಿ ನಗದು ಪುರಸ್ಕಾರ ಗೆದ್ದರು. 12ನೇ ತರಗತಿ ಪೂರೈಸಿರುವ ಕುನಾಲ್ ಕಳೆದ ಬಾರಿಯೂ ಮೈಸೂರಿನಲ್ಲಿ ಪ್ರಶಸ್ತಿ ಗೆದ್ದಿದ್ದರು. ಅವರ ತಂದೆ ಮುರಳೀಧರ್ ಕೂಡ ಈ ಟೂರ್ನಿಯಲ್ಲಿ ಭಾಗವಹಿಸಿ 42ನೇ ಸ್ಥಾನ ಪಡೆದರು.
ತಮಿಳುನಾಡಿನವರೇ ಆದ ಎಸ್. ಪ್ರಸನ್ನ ಎಂಟೂವರೆ ಅಂಕ ಗಳಿಸಿ ಎರಡನೇ ಸ್ಥಾನ ಪಡೆದರೆ, ಅದೇ ರಾಜ್ಯದ ಸೈಯದ್ ಅನ್ವರ್ ಶಾಜುಲಿ ಎಂಟು ಪಾಯಿಂಟ್ನೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಕರ್ನಾಟಕದ ಎಚ್.ಜಿ. ಸಂತೋಷ ಕಶ್ಯಪ್, ಕೆ.ಎಸ್. ರಘುನಂದನ್ ಮತ್ತು ಕೇರಳದ ಓ.ಟಿ. ಅನಿಲಕುಮಾರ್ ತಲಾ ಎಂಟು ಪಾಯಿಂಟ್ ಗಳಿಸಿ, ಕ್ರಮವಾಗಿ ನಾಲ್ಕು, ಐದು ಮತ್ತು ಆರನೇ ಸ್ಥಾನ ಪಡೆದರು.
ಕರ್ನಾಟಕದ ಭರವಸೆಯ ಆಟಗಾರರಾದ ಆದಿತ್ಯ ಚಕ್ರವರ್ತಿ, ವಿನಾಯಕ ಕುಲಕರ್ಣಿ, ಎ. ಆಗಸ್ಟಿನ್, ಕಿಶನ್ ಗಂಗೋಳ್ಳಿ, ರಾಮಚಂದ್ರ ಭಟ್, ವಿ. ರಾಘವೇಂದ್ರ ತಲಾ ಏಳೂವರೆ ಅಂಕಗಳನ್ನು ಗಳಿಸಿದರು. ಮೈಸೂರಿನ ಎಚ್.ಎ. ಅಮೋಘ, ಎಲ್. ವಿವೇಕಾನಂದ, ಆರ್. ಪಾರ್ಥಸಾರಥಿ ತಲಾ ಏಳು ಅಂಕಗಳನ್ನು ಪಡೆದರು.