ಬೆಂಗಳೂರು: ದಯಾನಂದ್ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಬೆಂಗಳೂರು ಕಿಕ್ಕರ್ಸ್ ತಂಡ ಮಂಡ್ಯದಲ್ಲಿ ನಡೆಯುತ್ತಿರುವ ನಾಗೇಗೌಡ ಹಾಗೂ ಮೀರ್ ಅಬ್ದುಲ್ ಕರೀಮ್ ಸ್ಮಾರಕ ರಾಜ್ಯ ಫುಟ್ಬಾಲ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿತು.
ಮಂಡ್ಯ ಜಿಲ್ಲೆ ಫುಟ್ಬಾಲ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಗುರುವಾರ ಕಿಕ್ಕರ್ಸ್ 3-1ಗೋಲುಗಳಿಂದ ಎಬಿಡಬ್ಲ್ಯುಎಸ್ ಬೆಂಗಳೂರು ತಂಡವನ್ನು ಮಣಿಸಿತು.
ದಯಾನಂದ್ 5, 12 ಹಾಗೂ 25ನೇ ನಿಮಿಷದಲ್ಲಿ ಗೋಲು ಗಳಿಸಿ ಕಿಕ್ಕರ್ಸ್ ತಂಡದ ಗೆಲುವಿನ ರೂವಾರಿಯೆನಿಸಿದರು. ಎಬಿಡಬ್ಲ್ಯುಎಸ್ ತಂಡದ ಏಕೈಕ ಗೋಲನ್ನು ಮಹೇಂದ್ರನ್ 10ನೇ ನಿಮಿಷದಲ್ಲಿ ಗಳಿಸಿದರು.
ಯುಎಫ್ಸಿ ತಂಡಕ್ಕೆ ನಿರಾಸೆ: ದಿನದ ಇನ್ನೊಂದು ಪಂದ್ಯದಲ್ಲಿ ಬೆಂಗಳೂರಿನ ಯುನೈಟೆಡ್ ಫುಟ್ಬಾಲ್ ಅಸೋಸಿಯೇಷನ್ (ಯುಎಫ್ಸಿ) ತಂಡ 0-2ಗೋಲುಗಳಿಂದ ಎಡಿಇ ಬೆಂಗಳೂರು ತಂಡದ ಎದುರು ನಿರಾಸೆ ಅನುಭವಿಸಿತು.
ವಿಜಯಿ ತಂಡದ ಶ್ರೀಧರ್ 25ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರೆ, ರಾಜ್ಕಿರಣ್ 57ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು.