ಕಠ್ಮಂಡು (ಪಿಟಿಐ): ಭಾರತ ತಂಡದವರು ಭಾನುವಾರ ಇಲ್ಲಿ ಆರಂಭವಾದ ಎಸ್ಎಎಫ್ಎಫ್ 16 ವರ್ಷದೊಳಗಿನವರ ಫುಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಶುಭಾರಂಭ ಮಾಡಿದ್ದಾರೆ.
ಆರ್ಮಿ ಕ್ರೀಡಾಂಗಣದಲ್ಲಿ ನಡೆದ `ಬಿ' ಗುಂಪಿನ ಮೊದಲ ಪಂದ್ಯದಲ್ಲಿ ಭಾರತ 4-1 ಗೋಲುಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿತು.
ವಿಜಯಿ ತಂಡ ವಿರಾಮದ ವೇಳೆಗೆ 2-1 ಗೋಲುಗಳಿಂದ ಮುಂದಿತ್ತು. ಸ್ಟ್ರೈಕರ್ ಬೆದಾಶ್ವೋರ್ ಸಿಂಗ್ 23ನೇ ಹಾಗೂ 88ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಕೃಷ್ಣ ಪಂಡಿತ್ (21ನೇ ನಿಮಿಷ) ಹಾಗೂ ಪ್ರೊಸೆನ್ಜಿತ್ (66ನೇ ನಿ.) ಗೋಲು ಗಳಿಸಿದರು. ಈ ಗೆಲುವಿನ ಮೂಲಕ ಭಾರತಕ್ಕೆ ಮೂರು ಪಾಯಿಂಟ್ ಲಭಿಸಿತು.
`ಮೂಲತತ್ವಕ್ಕೆ ಬದ್ಧರಾಗಿ ನಾವು ಆಡಿದೆವು. ಚಾಂಪಿಯನ್ಷಿಪ್ಗೆ ಮುನ್ನ ನಡೆಸಿದ ಕಠಿಣ ಪ್ರಯತ್ನಕ್ಕೆ ಫಲ ಲಭಿಸಿದೆ. ಉತ್ತಮ ಆರಂಭ ಪಡೆದಿರುವುದು ಖುಷಿ ತಂದಿದೆ' ಎಂದು ಭಾರತ ತಂಡದ ಕೋಚ್ ಗೌತಮ್ ಘೋಷ್ ನುಡಿದಿದ್ದಾರೆ.
ಭಾರತ, ಶ್ರೀಲಂಕಾ ಮಾತ್ರವಲ್ಲದೇ ಬಾಂಗ್ಲಾದೇಶ ಕೂಡ `ಬಿ' ಗುಂಪಿನಲ್ಲಿ ಸ್ಥಾನ ಪಡೆದಿದೆ. `ಎ' ಗುಂಪಿನಲ್ಲಿ ಹಾಲಿ ಚಾಂಪಿಯನ್ ಪಾಕಿಸ್ತಾನ, ಆತಿಥೇಯ ನೇಪಾಳ, ಭೂತಾನ್ ಹಾಗೂ ಆಫ್ಘಾನಿಸ್ತಾನ ತಂಡಗಳಿವೆ.
ಜುಲೈ 25 ರಂದು ಬಾಂಗ್ಲಾದೇಶ ವಿರುದ್ಧ ಭಾರತ ಎರಡನೇ ಪಂದ್ಯವನ್ನಾಡಲಿದೆ. ಜುಲೈ 27 ಹಾಗೂ 28ಕ್ಕೆ ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಜುಲೈ 30ರಂದು ಫೈನಲ್ ಹಣಾಹಣಿ ನಡೆಯಲಿದೆ.