ನವದೆಹಲಿ (ಐಎಎನ್ಎಸ್): ಎಎಫ್ಸಿ ಚಾಲೆಂಜ್ ಕಪ್ ಫುಟ್ಬಾಲ್ ಟೂರ್ನಿಗೆ ತಯಾರಾಗಲು ದುಬೈನಲ್ಲಿ ನಡೆಯಲಿರುವ ಶಿಬಿರದಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡಕ್ಕೆ ಯಾವುದೇ ಹಣ ನೀಡುವುದಿಲ್ಲ ಎಂದು ಭಾರತ ಕ್ರೀಡಾ ಪ್ರಾಧಿಕಾರ (ಎಸ್ಎಐ) ತಿಳಿಸಿದೆ.
`ಸರ್ಕಾರ ಈಗ ಒಲಿಂಪಿಕ್ಸ್ ತಯಾರಿಯತ್ತ ಮಾತ್ರ ಗಮನ ಹರಿಸುತ್ತಿದೆ~ ಎಂದು ಎಸ್ಎಐ ಪ್ರಧಾನ ನಿರ್ದೇಶಕ ದೇಶ್ ದೀಪಕ್ ವರ್ಮ ನುಡಿದಿದ್ದಾರೆ. ಈ ಮೊದಲು ನಿಗದಿಯಾದಂತೆ ದುಬೈ ಶಿಬಿರದಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡಕ್ಕೆ 40 ಲಕ್ಷ ರೂ.ನೀಡಬೇಕಿತ್ತು.
`ಆದರೆ ಈಗ ಹಣ ನೀಡಲು ಸಾಧ್ಯವಿಲ್ಲ. ಏಕೆಂದರೆ ಎಲ್ಲಾ ಹಣವನ್ನು ಒಲಿಂಪಿಕ್ಸ್ ತಯಾರಿಗೆ ಮೀಸಲಿಟ್ಟಿದ್ದೇವೆ. ಈಗ ಇರುವ ಹಣವನ್ನು ಒಲಿಂಪಿಕ್ಸ್ ತಯಾರಿಗೆ ಮಾತ್ರ ವಿನಿಯೋಗಿಸಬೇಕೆಂದು ಸ್ಟೀಯರಿಂಗ್ ಸಮಿತಿ ಕೂಡ ಹೇಳಿದೆ~ ಎಂದು ವರ್ಮ ಸ್ಪಷ್ಟಪಡಿಸಿದ್ದಾರೆ.