ಬೆಂಗಳೂರು: ‘ಕರ್ನಾಟಕ ರಾಜ್ಯ ನಿಜಶರಣ ಅಂಬಿಗರ ಚೌಡಯ್ಯನವರ ಸಮಾಜ ಅಧ್ಯಯನ ಅಕಾಡೆಮಿಯ ವತಿಯಿಂದ ಫೆ. 7 ರಿಂದ ಮೂರು ದಿನಗಳು ಗಂಗಾಮತಸ್ಥರನ್ನು ಒಂದುಗೂಡಿಸಲು ಗುಲ್ಬರ್ಗ ಜಿಲ್ಲೆಯ ಯಾನಾಗುಂದಿಯ ಸುಕ್ಷೇತ್ರದಲ್ಲಿ ರಾಜ್ಯಮಟ್ಟದ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ’ ಎಂದು ಜವಳಿ, ಬಂದರು ಮತ್ತು ಒಳನಾಡು ಖಾತೆ ಸಚಿವ ಬಾಬುರಾವ್ ಚಿಂಚನಸೂರು ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಅಂದಾಜು 60 ಲಕ್ಷದಷ್ಟಿರುವ ಗಂಗಾಮತಸ್ಥ ಜನಾಂಗವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದದ್ದು, ಟೋಕ್ರೆಕೋಳಿ, ಕೋಲಿ, ಕೋಯ ಇತ್ಯಾದಿ ಹೆಸರುಗಳಿಂದ ಕರೆಸಿಕೊಂಡು ಹರಿದು ಹಂಚಿಹೋಗಿದೆ’ ಎಂದರು.
‘ಹರಿದು ಹಂಚಿಹೋಗಿರುವ ಗಂಗಾಮತಸ್ಥ ಸಮಾಜವನ್ನು ಒಂದುಗೂಡಿಸಲು ಈ ಸಮಾವೇಶ ಸಹಾಯಕವಾಗಲಿದೆ’ ಎಂದು ಅಭಿಪ್ರಾಯಪಟ್ಟರು.
‘ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದು, ಕೇಂದ್ರ ಸಚಿವರಾದ ವೀರಪ್ಪ ಮೊಯಿಲಿ, ಮಲ್ಲಿಕಾರ್ಜುನ ಖರ್ಗೆ ಮತ್ತಿತರರು ಭಾಗವಹಿಸಲಿದ್ದಾರೆ’ ಎಂದರು.