ನವದೆಹಲಿ (ಪಿಟಿಐ): ಏಪ್ರಿಲ್–ಮೇನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಲೇಖಾನುದಾನ ಅನುಮೋದನೆಗಾಗಿ ಫೆಬ್ರುವರಿ ಮಧ್ಯಾವಧಿಯಲ್ಲಿ ಲೋಕಸಭೆ ಅಧಿವೇಶನ ನಡೆಯಲಿದೆ.
‘ಸುಮಾರು 10 ಅಥವಾ 15 ದಿನ ಅಧಿವೇಶನ ನಡೆಯಲಿದೆ. ಲೇಖಾನುದಾನದ ಜತೆ ರೈಲ್ವೆ ಲೇಖಾನುದಾನಕ್ಕೂ ಅನುಮೋದನೆ ನೀಡಲಾಗುತ್ತದೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಮಲ್ನಾಥ್ ಹೇಳಿದ್ದಾರೆ. ಹೊಸ ಸರ್ಕಾರ ಪೂರ್ಣಪ್ರಮಾಣದ ಬಜೆಟ್ ಮಂಡಿಸಲಿದೆ.
‘ಜನಲೋಕಪಾಲ ಮಸೂದೆ ಅಂಗೀಕಾರಗೊಂಡ ಬಳಿಕ ಯುಪಿಎ ಸರ್ಕಾರವು, ಭ್ರಷ್ಟಾಚಾರ ನಿಗ್ರಹಕ್ಕೆ ಸಂಬಂಧಿಸಿದ ಕೆಲವೊಂದು ಮಹತ್ವದ ಮಸೂದೆಗಳಿಗೆ ಅನುಮೋದನೆ ನೀಡಲು ಉದ್ದೇಶಿಸಿದೆ’ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.
‘ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರವು ಈ ಮಹತ್ವದ ಮಸೂದೆಗಳಿಗೆ ಅಂಗೀಕಾರ ನೀಡಲು ಹೊರಟಿದೆ’ ಎನ್ನುವ ಅಭಿಪ್ರಾಯವನ್ನು ಅವರು ತಳ್ಳಿಹಾಕಿದರು.
ಅವ್ಯವಹಾರ ಬಯಲಿಗೆಳೆಯುವವರ ರಕ್ಷಣೆ ಮಸೂದೆ, ನ್ಯಾಯಾಂಗ ಉತ್ತರದಾಯಿತ್ವ ಮಸೂದೆ, ಭ್ರಷ್ಟಾಚಾರ ನಿಗ್ರಹ ತಿದ್ದುಪಡಿ ಮಸೂದೆ, ಸಕಾಲ ಸೇವೆ, ನಾಗರಿಕರ ಹಕ್ಕು ಮಸೂದೆ-ಗಳಿಗೆ ಅಂಗೀಕಾರ ದೊರೆಯಬೇಕಿದೆ.