ಬೆಂಗಳೂರು: ಆತಿಥೇಯ ಕರ್ನಾಟಕ ಹಾಗೂ ಚಾಂಪಿಯನ್ಸ್ ಜಾರ್ಖಂಡ್ ತಂಡದವರು ಇಲ್ಲಿ ನಡೆಯುತ್ತಿರುವ ಒಂಬತ್ತನೇ ಅಖಿಲ ಭಾರತ ಬಿ.ಎಸ್.ಎನ್.ಎಲ್. ಹಾಕಿ ಟೂರ್ನಿ ಫೈನಲ್ ಪ್ರವೇಶಿಸಿದರು.
ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡದವರು 6-1 ಗೋಲುಗಳಿಂದ ಒಡಿಶಾ ತಂಡವನ್ನು ಮಣಿಸಿದರು. ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ವಿಜಯಿ ತಂಡದ ಡಿ. ಪಾರ್ಥಿಬನ್ (2), ಡಾಮ್ನಿಕ್ ಜಾರ್ಜ್ (2), ಪ್ರಫುಲ್ ಕುಜೂರ್, ಮೋತಿಲಾಲ್ ರಾಥೋಡ್ ಹಾಗೂ ಎದುರಾಳಿ ತಂಡದ ಬಿಲ್ಫ್ರಿಟ್ ಡುಂಗ್ ಡುಂಗ್ ಗೋಲು ತಂದಿತ್ತರು.
ಇದೇ ಟೂರ್ನಿ ಇನ್ನೊಂದು ಸೆಮಿಫೈನಲ್ನಲ್ಲಿ ಚಾಂಪಿಯನ್ಸ್ ಜಾರ್ಖಂಡ್ ತಂಡ 5-0 ಗೋಲುಗಳಿಂದ ದೆಹಲಿ ಎನ್.ಟಿ.ಆರ್. ಮೇಲೆ ಸುಲಭ ವಿಜಯ ಸಾಧಿಸಿತು. ವಿಜಯಿ ತಂಡ ಲಲಿತ್ ಕುಮಾರ್ ಪನ್ನಾ, ಥಾಮಸ್ ನಾಗ್ (2), ಮನೋಜ್ ಪ್ರಧಾನ್, ಗೈಂದ್ರಾ ಟಿಗ್ಗಾ ಚೆಂಡನ್ನು ಯಶಪಡಿಸಿಕೊಂಡರು.ಫೈನಲ್ ಪಂದ್ಯ ಶನಿವಾರ ಮಧ್ಯಾಹ್ನ 3-00 ಗಂಟೆಗೆ ನಡೆಯಲಿದೆ.