ಧರ್ಮಪುರ: ಫ್ಲೋರೈಡ್ ಮುಕ್ತ ಕುಡಿಯುವ ನೀರು ಸರಬರಾಜಿಗೆ ಒತ್ತಾಯಿಸಿ ವಿವಿಧ ಗ್ರಾಮಗಳ ಗ್ರಾಮಸ್ಥರು ಭಾನುವಾರ ಬೈಕ್ ರ್ಯಾಲಿ ನಡೆಸಿದರು.
ಹೋಬಳಿಯು ಬಯಲುಸೀಮೆ ಮತ್ತು ಸತತ ಬರಗಾಲ ಪೀಡಿತ ಪ್ರದೇಶವಾಗಿದ್ದು, ಈ ಭಾಗದಲ್ಲಿ ಕುಡಿಯುವ ನೀರಿಗೆ ತುಂಬಾ ತೊಂದರೆಯಾಗಿದೆ. ಅಂತರ್ಜಲ ಬತ್ತಿ ಹೋಗಿದೆ. ಕೊಳವೆ ಬಾವಿಗಳ ಮೇಲೆ ಅವಲಂಬನೆಯಾಗಿದ್ದ ರೈತರು ಕಂಗಾಲಾಗಿದ್ದಾರೆ. ಅತಿ ಆಳವಾಗಿ ಕೊರೆದ ಕೊಳವೆ ಬಾವಿಗಳಲ್ಲಿನ ಕುಡಿಯುವ ನೀರು ಫ್ಲೋರೈಡ್ನಿಂದ ಕೂಡಿದೆ ಎಂದು ಆರೋಪಿಸಿ ನೂರಾರು ಮಂದಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ಹೋಬಳಿಯ ಹರಿಯಬ್ಬೆ, ಶ್ರವಣಗೆರೆ, ಚಿಲ್ಲಹಳ್ಳಿ, ಅರಳೀಕೆರೆ, ಹೊಸಕೆರೆ, ಬೇತೂರು, ಖಂಡೇನಹಳ್ಳಿ, ಪಿ.ಡಿ. ಕೋಟೆ, ಸಕ್ಕರ, ಸೂಗೂರು, ಹಲಗಲದ್ದಿ, ಮದ್ದಿಹಳ್ಳಿ, ಬೆನಕನಹಳ್ಳಿ, ಕೃಷ್ಣಾಪುರ, ಈಶ್ವರಗೆರೆ, ಅಬ್ಬಿನಹೊಳೆ, ಕಂಬತ್ತನಹಳ್ಳಿ, ಗೊಲ್ಲಾಹಳ್ಳಿ, ಬುರುಡುಕುಂಟೆ ಮತ್ತಿತರ ಗ್ರಾಮಗಳ ನಿವಾಸಿಗಳು ಮೆರವಣಿಗೆ ನಡೆಸಿದರು.
ಈ ಸಂದರ್ಭಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಚ್. ಮಂಜುನಾಥ್ ಮಾತನಾಡಿ, ನೀರಾವರಿಗಾಗಿ ಮಾಡಿದ ಹೋರಾಟಕ್ಕೆ ನೂರು ವರ್ಷಗಳು ತುಂಬಿವೆ. ಆದರೆ, ಫಲಿತಾಂಶ ಮಾತ್ರ ಶೂನ್ಯ. ಜಾನುವಾರುಗಳಿಗೆ ಮೇವಿಲ್ಲ. ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ದನಕರುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡಲಾಗುತ್ತಿದೆ. ಕೃಷಿ ಕಾರ್ಮಿಕರು ಕೆಲಸವಿಲ್ಲದೆ ಗುಳೇ ಹೊರಟಿದ್ದಾರೆ ಎಂದು ತಿಳಿಸಿದರು.
ಮನವಿ ಸಲ್ಲಿಕೆ: ಬೈಕ್ ರ್ಯಾಲಿಯ ಮೂಲಕ, ಶಿರಾ ಪಟ್ಟಣದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಗೆ ಆಗಮಿಸಿದ್ದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಕೃಷ್ಣ, ಈ ಬಗ್ಗೆ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸುವೆ ಎಂದು ಭರವಸೆ ನೀಡಿದರು.