ಸೊರಬ: ಆರೋಗ್ಯ ಕ್ಷೇತ್ರದಲ್ಲಿ ತಾಲ್ಲೂಕು ತುಂಬಾ ಹಿಂದೆ ಉಳಿದಿದ್ದು, ಜಾಗೃತಿ ಮೂಡಿಸುವ ಅಗತ್ಯ ಇದೆ. ಆರೋಗ್ಯ ಶಿಬಿರಗಳನ್ನು ಹೆಚ್ಚು ಹೆಚ್ಚು ನಡೆಸಲು ಮುಂದಾಗಬೇಕಿದೆ ಎಂದು ವೈದ್ಯ ಡಾ. ನಾಗೇಂದ್ರಪ್ಪ ನುಡಿದರು.
ಭಾನುವಾರ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಸ್ಮರಣಾರ್ಥ ತವನಂದಿ ಗ್ರಾಮದಲ್ಲಿ ಪಟ್ಟಣದ ಸುಧನ್ಯ ಪಾಲಿಕ್ಲಿನಿಕ್, ಸ್ಥಳೀಯ ಗ್ರಾಮ ಪಂಚಾಯ್ತಿ, ಗ್ರಾಮ ಸಲಹಾ ಸಮಿತಿ, ಆಂಜನೇಯ ಯುವಕ ಸಂಘ, ಪತ್ರಕರ್ತರ ಸಂಘ, ಪಾಲಿಟೆಕ್ನಿಕ್ ಮೂಲಕ ಸಮುದಾಯ ಅಭಿವೃದ್ಧಿ ಯೋಜನೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ, ಔಷಧ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಡ ವಿದ್ಯಾರ್ಥಿಗಳಿಗೆ ಬಂಗಾರಪ್ಪ ನೀಡಿದ್ದ ಸಹಾಯ, ಸಹಕಾರ ಅಸದಳವಾಗಿದ್ದು, ಶಿಬಿರವನ್ನು ಅವರಿಗೆ ಅರ್ಪಿಸುತ್ತಿರುವುದಾಗಿ ಅವರು ತಿಳಿಸಿದರು.
ನಿವೃತ್ತ ಸೈನಿಕ ಭೀಮಪ್ಪ ರಕ್ತದಾನದ ಮಹತ್ವ ಕುರಿತು ಮಾತನಾಡಿದರು.ಗ್ರಾ.ಪಂ. ಅಧ್ಯಕ್ಷ ಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷೆ ರೇಣುಕಮ್ಮ, ಸದಸ್ಯರಾದ ದೇವಮ್ಮ, ಬಸವರಾಜ್, ಆನಂದಪ್ಪ, ಬೊಮ್ಮಪ್ಪ, ಮಂಜಪ್ಪ, ಎಚ್ಕೆಬಿ ಸ್ವಾಮಿ, ಡಾ. ರವಿಶಂಕರ್, ಡಾ. ಜ್ಞಾನೇಶ್, ಡಾ. ಮೊಗೇರ, ಡಾ. ಗಿರೀಶ್ ಉಪಸ್ಥಿತರಿದ್ದರು.
1,200ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದರು. ರೂ 1 ಲಕ್ಷ ವೆಚ್ಚದ ಔಷಧಗಳನ್ನು ಸಂಘಟಕರು ಉಚಿತವಾಗಿ ವಿತರಿಸಿದರು. ಉಚಿತ ರಕ್ತ, ಮೂತ್ರ ತಪಾಸಣೆ ಸಹ ನಡೆಯಿತು.