ಬೆಳಗಾವಿ: ನಗರದಲ್ಲಿ `ಬಂಜಾರ ಭವನ~ ನಿರ್ಮಿಸಲು ಒಂದು ಎಕರೆ ನಿವೇಶನವನ್ನು ನೀಡಬೇಕು ಎಂದು ಬಂಜಾರರ ಸಂಘದ ಅಧ್ಯಕ್ಷ ಎಂ.ಟಿ. ರಾಠೋಡ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿರುವ ಅವರು, ಜಿಲ್ಲೆಯಲ್ಲಿ ಬಂಜಾರರು ಸುಮಾರು 10ರಿಂದ 15 ಸಾವಿರ ಬಂಜಾರರು ನೆಲೆಸಿದ್ದಾರೆ. ಬಡವರು, ಕೂಲಿ ಕೆಲಸ ಮಾಡುವವರು, ಆಟೋ ಓಡಿಸುವವರು, ಕಾಯಿಪಲ್ಲೆ ಮಾರುವವರು ತಮ್ಮದೇ ಆದ ವಸತಿ ಸ್ಥಾನ ಇಲ್ಲದೇ ಇರುವುದರಿಂದ ಬಂಜಾರ ಸಮಾಜದವರು ಒಂದು ಕಡೆ ಸೇರಿ ಹಬ್ಬ ಆಚರಿಸಲು ಸಾಧ್ಯವಾಗುತ್ತಿಲ್ಲ.
ಬೇರೆ ಬೇರೆ ಕಡೆಯಿಂದ ಬರುವವರಿಗೆ ತಂಗುದಾಣ ಇಲ್ಲದಂತಾಗಿದೆ. ಹೀಗಾಗಿ ಬಂಜಾರ ಭವನ ನಿರ್ಮಿಸುವ ಅಗತ್ಯವಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ತಾಂಡಾ ಅಭಿವೃದ್ಧಿ ನಿಗಮವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಂಜಾರ ಭವನವನ್ನು ಸ್ಥಾಪಿಸಲು 2 ಕೋಟಿ ರೂಪಾಯಿ ನೆರವು ನೀಡುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಬಂಜಾರರ ಸಂಘಗಳಿಂದ ತಮ್ಮದೇ ನಿವೇಶನ ಹೊಂದಲು ಸೂಚಿಸಲಾಗಿದೆ. ಹೀಗಾಗಿ ಬಂಜಾರ ಭವನ ನಿರ್ಮಿಸಲು ಒಂದು ಎಕರೆ ನಿವೇಶನವನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.