ಯಲಬುರ್ಗಾ: ತಾಲ್ಲೂಕಿನ ಬಂಡಿ ಗ್ರಾಮದಲ್ಲಿ ಈಚೆಗೆ ಗದುಗಿನ ಲಿಂ. ಪಂಡಿತ ಪುಟ್ಟರಾಜ ಗವಾಯಿಗಳವರ ಮೂರನೇ ವರ್ಷದ ಪುಣ್ಯಾರಾಧನೆ ಪ್ರಯುಕ್ತ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಾನಿಧ್ಯ ವಹಿಸಿದ್ದ ಮಂಗಳೂರಿನ ಅರಳಲೆ ಹಿರೇಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ ಪುಟ್ಟರಾಜ ಗವಾಯಿಗಳು ಸಂಚಾರಿ ಸಂಗೀತ ವಿಶ್ವ ವಿದ್ಯಾಲಯದಂತಿದ್ದರು ಎಂದು ಬಣ್ಣಿಸಿದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ಡಾ. ಮಲ್ಲಿಕಾರ್ಜುನ ಕುಂಬಾರ, ಮುನಿಯಪ್ಪ ಹುಬ್ಬಳ್ಳಿ, ಜಿಲ್ಲಾ ಕಸಾಪ ಅಧ್ಯಕ್ಷ ವೀರಣ್ಣ ನಿಂಗೋಜಿ ಸೇರಿದಂತೆ ಅನೇಕರು ಮಾತನಾಡಿ, ಕೇವಲ ಸಂಗೀತದಲ್ಲಿಯೇ ಮಹಾನ್ ಸಾಧನೆ ಮಾಡಿಲ್ಲ, ವ್ಯಕ್ತಿತ್ವದಲ್ಲಿ ಪರೋಪಕಾರದಲ್ಲಿ ಅಪರೂಪದ ಮಾದರಿ ಗುಣಗಳನ್ನು ಹೊಂದಿದ್ದರು. ಶಿಷ್ಯರ ಉದ್ದಾರಕ್ಕೆ ಜೀವನನ್ನು ಸವೆಸಿದ ಏಕೈಕ ಸ್ವಾಮೀಜಿ ಎಂದೇ ಗುರುಸಿಕೊಂಡವರೇ ಪುಟ್ಟರಾಜ ಗವಾಯಿಗಳು ಎಂದು ಅಭಿಪ್ರಾಯಪಟ್ಟರು.
ಇದಕ್ಕು ಮುನ್ನ, ಗ್ರಾಮದ ವಿವಿಧ ಬೀದಿಗಳಲ್ಲಿ ಗವಾಯಿಗಳವರ ಭಾವಚಿತ್ರದ ಅದ್ದೂರಿ ಮೆರವಣಿಗೆ ಆಯೋಜಿಸಿ ನಂತರ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಹಮ್ಮಿಕೊಂಡಿದ್ದರು. ಸ್ಥಳೀಯ ಹಾಗೂ ಇನ್ನಿತರ ಸ್ಥಳಗಳಿಂದ ಆಗಮಿಸಿದ್ದ ಸಂಗೀತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಶರಣಕುಮಾರ ಬಂಡಿ ಪ್ರಾರ್ಥಿಸಿದರು. ಮಹಾಂತೇಶ ನೆಲಾಗಣಿ ಸ್ವಾಗತಿಸಿದರು. ಪ್ರಕಾಶಯ್ಯ ಹಿರೇಮಠ ವಂದಿಸಿದರು.