ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ ರಾಷ್ಟ್ರೀಯ ಉದ್ಯಾನವನ: ಪರಿಸರ ಸೂಕ್ಷ್ಮವಲಯ ಪಟ್ಟಿಗೆ ಸೇರ್ಪಡೆ

Last Updated 18 ಸೆಪ್ಟೆಂಬರ್ 2011, 18:30 IST
ಅಕ್ಷರ ಗಾತ್ರ

ಬೆಂಗಳೂರು: ಹುಲಿ ಯೋಜನೆಯ ಜಾರಿಯಲ್ಲಿರುವ ಬಂಡೀಪುರ ರಾಷ್ಟೀಯ ಉದ್ಯಾನವನವನ್ನು `ಪರಿಸರ ಸೂಕ್ಷ್ಮ ವಲಯ~ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿ ಆದೇಶ ಹೊರಡಿಸಿದೆ.

ಈ ಕುರಿತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ `ಹುಲಿ ಯೋಜನೆ~ಯ ನಿರ್ದೇಶಕರೂ ಆಗಿರುವ ಬಿ.ಜೆ.ಹೊಸಮಠ ಅವರು ಕಳೆದ ಜೂನ್ 30ರಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ವನ್ಯಜೀವಿ ವಿಭಾಗದ ಉಪ ಮಹಾನಿರೀಕ್ಷಕರಾದ ಪ್ರಕೃತಿ ಶ್ರೀವಾತ್ಸವ್ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು.

ಪ್ರಸ್ತಾವನೆ ಅಂಗೀಕರಿಸಿರುವ ಸಚಿವಾಲಯ ಇತ್ತೀಚೆಗಷ್ಟೇ ಈ ಘೋಷಣೆ ಮಾಡಿದ್ದು, ಕೇಂದ್ರದ ಗೆಜೆಟ್‌ನಲ್ಲಿ ಪ್ರಕಟಿಸುವುದಷ್ಟೇ ಬಾಕಿ ಉಳಿದಿದೆ. ಈ ಕುರಿತ ಪತ್ರವನ್ನು ಸಚಿವಾಲಯವು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ವಾರದ ಹಿಂದೆಯೇ ರವಾನಿಸಿದೆ ಎಂದು ಅರಣ್ಯ ಭವನದ ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಭಾರತದಾದ್ಯಂತ ಇರುವ ಎಲ್ಲ ರಾಷ್ಟ್ರೀಯ ಉದ್ಯಾನಗಳು, ಅಭಯಾರಣ್ಯಗಳು ಸೂಕ್ಷ್ಮವಲಯಗಳನ್ನಾಗಿ ಮಾಡಬೇಕಿದೆ. ಆದರೆ ತಿಳಿವಳಿಕೆ ಕೊರತೆ ಇರುವ ಈ ಉದ್ಯಾನವನಗಳ ಸುತ್ತಮುತ್ತಲ ಗ್ರಾಮಸ್ಥರು ಮತ್ತು ಕೆಲ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡದಿಂದಾಗಿ ಈ ಪ್ರಕ್ರಿಯೆ ರಾಜ್ಯದಲ್ಲಿ ವಿಳಂಬವಾಗುತ್ತಿದೆ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ `ಗೋವಾ ಪ್ರತಿಷ್ಠಾನ~ ಎಂಬ ಸಂಸ್ಥೆಯು ದೇಶದ ಅಭಯಾರಣ್ಯಗಳನ್ನು ಸೂಕ್ಷ್ಮ ವಲಯಗಳನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಸುಪ್ರೀಂಕೋರ್ಟ್‌ಗೆ 2004ರಲ್ಲಿ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಕಾಡುಗಳು ಮತ್ತು ವನ್ಯಜೀವಿಗಳ ರಕ್ಷಣೆಯ ಉದ್ದೇಶದಿಂದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ವ್ಯಾಪ್ತಿಯ ಅರಣ್ಯಗಳನ್ನು ಪರಿಸರ ಸೂಕ್ಷ್ಮವಲಯಗಳನ್ನಾಗಿ ಘೊಷಣೆ ಮಾಡಬೇಕು ಎಂದು 4 ಡಿಸೆಂಬರ್, 2006ರಲ್ಲಿ ನೀಡಿದ ತೀರ್ಪಿನಲ್ಲಿ   ಕೋರ್ಟ್ ನಿರ್ದೇಶನ ನೀಡಿತ್ತು.

ರಾಜ್ಯದ್ದೇ ವಿಳಂಬ: ಈ ನಿರ್ದೇಶನದ ಹಿನ್ನೆಲೆಯಲ್ಲಿ ಕೆಲ ಮಾರ್ಗದರ್ಶಿ ಸೂತ್ರಗಳನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿದ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು `ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡು, ಘೋಷಣೆಗೆ ಪೂರಕವಾಗಿ ಪ್ರಸ್ತಾವನೆ ಸಲ್ಲಿಸಬೇಕು~ ಎಂದು ಸೂಚಿಸಿ ಸುತ್ತೋಲೆ ಹೊರಡಿಸಿತ್ತು. ಹರಿಯಾಣ, ಗುಜರಾತ್, ಮಿಜೋರಾಂ, ಮೇಘಾಲಯ, ಅಸ್ಸಾಂ, ಗೋವಾ ರಾಜ್ಯಗಳು ಇದಕ್ಕೆ ಸ್ಪಂದಿಸಿ ಪ್ರಸ್ತಾವನೆಗಳನ್ನು ಸಲ್ಲಿಸಿದ್ದವು. ಆದರೆ ಕರ್ನಾಟಕವೂ ಸೇರಿದಂತೆ ಉಳಿದ ರಾಜ್ಯಗಳು ತಕ್ಷಣಕ್ಕೆ ಸ್ಪಂದಿಸಿರಲಿಲ್ಲ.

ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಮತ್ತೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಿ ಸಚಿವಾಲಯದ ಮೂಲಕ ಉಳಿದ ರಾಜ್ಯಗಳಿಗೆ ಕಳುಹಿಸಿತು. ಆ ನಂತರವಷ್ಟೇ ರಾಜ್ಯ ಸರ್ಕಾರ ಮೊಟ್ಟ ಮೊದಲ ಪ್ರಯತ್ನವಾಗಿ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೂ ಈ ಮಾನ್ಯತೆ ನೀಡಬೇಕು ಎಂದು ಪ್ರಸ್ತಾವನೆ ಸಲ್ಲಿಸಿತ್ತು.

ಏನು ಉಪಯೋಗ: ಈಗಾಗಲೇ ಬಂಡೀಪುರ ರಾಷ್ಟ್ರೀಯ ಉದ್ಯಾನವನ್ನು ಸಂರಕ್ಷಿತ ವಲಯವನ್ನಾಗಿ ಘೊಷಣೆ ಮಾಡಲಾಗಿದೆ. ಅದಾಗ್ಯೂ ಸಹ ಕೇಂದ್ರ ಸರ್ಕಾರ ನೀಡಿದ ಈ ಮಾನ್ಯತೆಯಿಂದ ಏನು ಉಪಯೋಗ? ಈಗಾಗಲೇ ಇರುವ ರೆಸಾರ್ಟ್‌ಗಳನ್ನು, ಗ್ರಾಮಗಳನ್ನು ತೆರವುಗೊಳಿಸಲಾಗುತ್ತಿದೆಯೇ ಎಂಬ ಪ್ರಶ್ನೆಗಳು ಉದ್ಭವವಾಗಿವೆ.

ಈ ಕುರಿತು ಮಾಹಿತಿ ನೀಡಿದ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ, `ಈಗಾಗಲೇ ಇರುವ ರೆಸಾರ್ಟ್‌ಗಳು ಹಾಗೆಯೇ ಮುಂದುವರೆಯಲಿದೆ. ಆದರೆ ಇನ್ನು ಮುಂದೆ ನೂತನ ರೆಸಾರ್ಟ್‌ಗಳ ಸ್ಥಾಪನೆ ಅಥವಾ ಕಾರ್ಖಾನೆಗಳ ಸ್ಥಾಪನೆ, ಗ್ರಾನೈಟ್ ಗಣಿಗಾರಿಕೆಗಳನ್ನು ನಿಯಂತ್ರಣ ಮಾಡಲಾಗುವುದು. ಇದರಿಂದ ಈ ವಲಯದ ಸುತ್ತಮುತ್ತಲ ಗ್ರಾಮಸ್ಥರ ಚಟುವಟಿಕೆಗಳಿಗೆ ಯಾವುದೇ ರೀತಿಯ ಧಕ್ಕೆಯಾಗುವುದಿಲ್ಲ. ಈ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಬೇರೂರಿದೆ~ ಎಂದರು.

ಮೊದಲಿನ ಮಾರ್ಗದರ್ಶಿ ಸೂತ್ರದ ಪ್ರಕಾರ, ಈ ಸೂಕ್ಷ್ಮ ವಲಯ ಘೊಷಣೆ ಮಾಡಿದ ವ್ಯಾಪ್ತಿಯಿಂದ 10 ಕಿ.ಮೀ.ಗಳವರೆಗೆ ಯಾವುದೇ ಮಾನವ ಚಟುವಟಿಕೆಗಳನ್ನು ನಡೆಸಬಾರದು ಎಂದು ತಿಳಿಸಲಾಗಿತ್ತು.
ಆದರೆ ಪ್ರದೇಶದಿಂದ ಪ್ರದೇಶಕ್ಕೆ ಮಾನವ ಚಟುವಟಿಕೆಗಳ ವ್ಯತ್ಯಾಸವನ್ನು ಗುರುತಿಸಿ 2, 4 ಕಿ.ಮೀ.ವರೆಗೆ ಸಡಿಲಿಕೆ ನೀಡಲಾಗಿದೆ.

ಎಲ್ಲ ಅಭಯಾರಣ್ಯಗಳು ಈ ಪಟ್ಟಿಗೆ
`ಬಂಡೀಪುರ ರಾಷ್ಟೀಯ ಉದ್ಯಾನವನದ ಮಾದರಿಯಲ್ಲೇ ಇತರ ಅಭಯಾರಣ್ಯಗಳನ್ನು ಪರಿಸರ ಸೂಕ್ಷ್ಮ ವಲಯವನ್ನಾಗಿ ಸೇರಿಸಲು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು~ ಎಂದು ಪ್ರಧಾನ ಮುಖ್ಯ ಅರಣ್ಯ   ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಬಿ.ಕೆ. ಸಿಂಗ್ ತಿಳಿಸಿದ್ದಾರೆ.

`ಶೀಘ್ರದಲ್ಲಿಯೇ ನಾಗರಹೊಳೆ ಅಭಯಾರಣ್ಯವನ್ನು ಈ ಪಟ್ಟಿಗೆ ಸೇರ್ಪಡೆ ಮಾಡಲು ಮನವಿ ಸಲ್ಲಿಸಲಿದ್ದೇವೆ. ಇದರಿಂದ ಜನರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಈ ಬಗ್ಗೆ ತಿಳಿವಳಿಕೆ ನೀಡುವ ಕಾರ್ಯವನ್ನು ಅರಣ್ಯ ಇಲಾಖೆ ಮಾಡಲಿದೆ. ಜನರ ಸುರಕ್ಷೆಯ ಜೊತೆಗೆ, ಅರಣ್ಯ ಮತ್ತು ವನ್ಯಜೀವಿಗಳನ್ನು, ಅದರಲ್ಲೂ ಅಳಿವಿನಂಚಿ ನಲ್ಲಿರುವ ಪ್ರಾಣಿಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗುತ್ತಿದೆ~ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT