ಖಾನಾಪುರ: ಬಂಡೂರಿ ನಾಲಾದಿಂದ ಮಲಪ್ರಭಾ ನದಿಗೆ ನೀರು ಹರಿಸುವ ಯೋಜನೆಯ ಉದ್ದೇಶಿತ ಕಾಮಗಾರಿ ಸ್ಥಳಕ್ಕೆ ಮಹಾದಾಯಿ ಜಲವಿವಾದ ನ್ಯಾಯಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಜೆ.ಎಂ. ಪಾಂಚಾಲ್ ನೇತೃತ್ವದ ಗುರುವಾರ ಭೇಟಿ ನೀಡಿ ಪರಿಶೀಲಿಸಿತು.
ತಾಲ್ಲೂಕಿನ ನೇರಸಾ ಗ್ರಾಮದಿಂದ ಎರಡು ಕಿ.ಮೀ ದೂರವಿರುವ, ನೇರಸಾ–-ಕೊಂಗಳಾ ಗ್ರಾಮಗಳ ನಡುವಿನ ಭೀಮಗಡ ಅರಣ್ಯ ಪ್ರದೇಶದಲ್ಲಿ ಹರಿಯುವ ಬಂಡೂರಿ ನಾಲಾ ಪ್ರದೇಶಕ್ಕೆ ನ್ಯಾಯಮಂಡಳಿಯ ತಂಡ ಹಾಗೂ ನೀರಾವರಿ ನಿಗಮದ ಅಧಿಕಾರಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.
ನೇರಸಾ ಹಾಗೂ ಅಶೋಕ ನಗರ ಗ್ರಾಮಸ್ಥರು ಮಹಾದಾಯಿ ನ್ಯಾಯಮಂಡಳಿಗೆ ತಮ್ಮ ಊರುಗಳಿಗೂ ಕುಡಿಯುವ ನೀರು ಪೂರೈಕೆಗೆ ಅವಕಾಶ ಕಲ್ಪಿಸಬೇಕು ಎಂಬ ಮನವಿಯನ್ನು ನೀಡಲು ಬಯಸಿದ್ದರು. ಪೊಲೀಸ್ ಹಾಗೂ ಅರಣ್ಯ ಇಲಾಖೆಯ ನಿರ್ಬಂಧದಿಂದ ಗ್ರಾಮಸ್ಥರು ತಂಡವನ್ನು ಭೇಟಿ ಮಾಡಲು ಪರದಾಡಬೇಕಾಯಿತು.
ಸ್ಥಳ ಪರಿಶೀಲನೆಯ ನಂತರ ನೀರಾವರಿ ನಿಗಮ, ಅರಣ್ಯ ಹಾಗೂ ಕಂದಾಯ ಇಲಾಖೆಗಳ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಬಂಡೂರಿ ತಿರುವು ಯೋಜನೆಗೆ ಸಂಬಂಧಿಸಿದಂತೆ ವಿವರ ಮಾಹಿತಿಯನ್ನು ತಂಡ ಪಡೆದುಕೊಂಡಿತು.