ಕೊಳ್ಳೇಗಾಲ: ಖಾಸಗಿ ಬಸ್ಸೊಂದು ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ತಾಳು ಬೆಟ್ಟದ ಸಮೀಪ ಮಂಗಳವಾರ ಸಂಜೆ ನಡೆದಿದೆ.
ಮೃತಪಟ್ಟವರನ್ನು ಹನೂರು ಗ್ರಾಮದ ಮಾದಯ್ಯ(45), ಕೊಳ್ಳೇಗಾಲದ ಮಹೇಂದ್ರ (30), ಕಾಗಲವಾಡಿಯ ಸ್ವಾಮಿ (45), ಮೈಸೂರಿನ ಶಶಿ (18) ಎಂದು ಗುರುತಿಸಲಾಗಿದೆ.
ಮಾದಯ್ಯ ಮತ್ತು ಶಶಿ ಸ್ಥಳದಲ್ಲೇ ಮೃತಪಟ್ಟರೆ, ಬಸ್ ಚಾಲಕ ಸ್ವಾಮಿ ಮಾರ್ಗ ಮಧ್ಯ ಹಾಗೂ ಮಹೇಂದ್ರ ಆಸ್ಪತ್ರೆಯಲ್ಲಿ ಮೃತಪಟ್ಟರು.
ಮಲೆ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲದ ಕಡೆಗೆ ಸಾಗುತ್ತ್ದ್ದಿದ ಈ ಬಸ್ಸಿನಲ್ಲಿ ಬೆಟ್ಟದಲ್ಲಿ ಶಿವರಾತ್ರಿ ಜಾಗರಣೆಯಲ್ಲಿ ಪಾಲ್ಗೊಂಡಿದ್ದ ಭಕ್ತರು ಪ್ರಯಾಣಿಸುತ್ತಿದ್ದರು.
ಬೆಟ್ಟದ ಕಡಿದಾದ ತಿರುವಿನಲ್ಲಿ ಎದುರಿನಿಂದ ಬಂದ ವಾಹನಕ್ಕೆ ದಾರಿ ನೀಡಲು ಈ ಬಸ್ಸಿನ ಚಕ್ರಕ್ಕೆ ಕಲ್ಲು ಕೊಟ್ಟು ನಿಲ್ಲಿಸಲಾಗಿತ್ತು.
ಆ ವಾಹನ ಸಾಗಿದ ನಂತರ ಕಲ್ಲು ತೆಗೆದು ತಿರುವಿನಲ್ಲಿ ಬಸ್ಸು ನಿಧಾನವಾಗಿ ಸಾಗುತ್ತಿದ್ದಂತೆ ಮುಂದಿನ ಚಕ್ರ ಪಂಕ್ಚರ್ ಆಗಿ, ಬಸ್ಸು ಚಾಲಕನ ನಿಯಂತ್ರಣ ಕಳೆದುಕೊಂಡು ಸಮೀಪದ ಬಂಡೆಗೆ ಅಪ್ಪಳಿಸಿ ಈ ಅವಘಢ ಜರುಗಿದೆ.
ಗಾಯಗೊಂಡವರನ್ನು ಪೊಲೀಸರು ಕೊಳ್ಳೇಗಾಲ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದರು. ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.