ಕಾರವಾರ: ಸಿಐಡಿ ಪೊಲೀಸ್ ಬಂಧನಲ್ಲಿದ್ದ ಬಂದರು ಅಧಿಕಾರಿ ಕ್ಯಾಪ್ಟನ್ ಸಿ. ಸ್ವಾಮಿ ಅವರಿಗೆ ಜಾಮೀನು ನಿರಾಕರಿಸಿರುವ ಇಲ್ಲಿಯ ಸಿಜೆಎಂ ನ್ಯಾಯಾಲಯವು ಬಂಧನವನ್ನು ಮಾ. 26ರ ವರೆಗೆ ವಿಸ್ತರಿಸಿದೆ. ನಗರದ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಸಿಜೆಎಂ ನ್ಯಾಯಾಲಯಕ್ಕೆ ಕ್ಯಾಪ್ಟನ್ ಸ್ವಾಮಿ ಅವರನ್ನು ಶನಿವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಹಾಜರುಪಡಿಸಲಾಯಿತು. 12.50 ಗಂಟೆಗೆ ನ್ಯಾಯಾಧೀಶರು ವಿಚಾರಣೆ ಆರಂಭಿಸಿದರು.
ಕ್ಯಾಪ್ಟನ್ ಸ್ವಾಮಿಯವರು ತಮ್ಮ ಸ್ಥಾನದ ಅಧಿಕಾರವನ್ನು ಬೇರೆಯವರಿಗೆ ಹಸ್ತಾಂತರ ಮಾಡದೇ ಇರುವುದರಿಂದ ತನಿಖೆಗೆ ಕೆಲವು ಕಂಪೆನಿಗೆ ಸಂಬಂಧಿಸಿದ ಮಾಹಿತಿ ಬೇಕಾಗಿದೆ. ಅಲ್ಲದೇ ತನಿಖೆ ಸಂಬಂಧಪಟ್ಟ ದಾಖಲೆಗಳು ಅವರ ಮನೆಯಲ್ಲಿರುವ ಸಾಧ್ಯತೆಗಳಿವೆ. ಆದ್ದರಿಂದ ತನಿಖೆಗೆ ಅನುಕೂಲವಾಗುವ ದೃಷ್ಟಿಯಿಂದ 15 ದಿನಗಳ ವರೆಗೆ ಸ್ವಾಮಿ ಅವರನ್ನು ಸಿಐಡಿ ವಶಕ್ಕೆ ನೀಡಬೇಕು ಎಂದು ಸರಕಾರಿ ಅಭಿಯೋಜಕಿ ಶೈಲಜಾ ಪಾಟೀಲ ವಾದ ಮಂಡಿಸಿದರು.
ಇದಕ್ಕೆ ತಕರಾರು ಹಾಕಿದ ಸ್ವಾಮಿ ಪರ ವಕೀಲ ನಾಗರಾಜ ನಾಯಕ, ಕ್ಲಾಸ್-1ಅಧಿಕಾರಿಯನ್ನು ಹದಿನೈದು ದಿನಗಳ ಕಾಲ ಸಿಐಡಿ ವಶಕ್ಕೆ ಕೊಡಬಾರದು ಎಂದು ಮನವಿ ಮಾಡಿದರು. ಮಾ. 26ರಂದು ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.
ಅಧಿಕಾರಿ ಮನೆ ಪರಿಶೀಲನೆ: ಬೈತಖೋಲ ಬಂದರಿನಿಂದ ಅದಿರು ಕಳ್ಳತನ ಆಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲೆಗಳನ್ನು ಸಂಗ್ರಹಿಸಲು ಸಿಐಡಿ ತಂಡ ನಗರದ ಬೈತಖೋಲ-ಅಲಿಗದ್ದಾದಲ್ಲಿರುವ ಬಂದರು ಅಧಿಕಾರಿ ಸ್ವಾಮಿ ಅವರ ಮನೆಗೆ ಸಂಜೆ 6 ಗಂಟೆಗೆ ಸುಮಾರಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿತು.ಒಂದು ಗಂಟೆಗಳಿಗೂ ಹೆಚ್ಚುಕಾಲ ಪರಿಶೀಲನೆ ನಡೆಸಿದ ಸಿಐಡಿ ಅಧಿಕಾರಿಗಳ ತಂಡ ಅವಶ್ಯಕ ಮಾಹಿತಿಗಳನ್ನು ಕಲೆ ಹಾಕಿದೆ ಎಂದು ಗೊತ್ತಾಗಿದೆ.