ನವದೆಹಲಿ(ಪಿಟಿಐ): ಕರ್ನಾಟಕದ ನವ ಮಂಗಳೂರು ಬಂದರು ಸೇರಿದಂತೆ ವಿವಿಧ 12 ಪ್ರಮುಖ ಬಂದರುಗಳನ್ನು ದೇಶದ ಪ್ರಮುಖ ನಗರಗಳು ಮತ್ತು ವಾಣಿಜ್ಯ ಕೇಂದ್ರಗಳ ಜತೆ ಸಂಪರ್ಕಿಸಲು ಹೆದ್ದಾರಿಗಳ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ಮೂರು ಯೋಜನೆಗಳು ಈಗಾಗಲೇ ಪೂರ್ಣಗೊಂಡಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
`ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ'ಯಡಿ ಕೈಗೊಂಡಿರುವ ಹೆದ್ದಾರಿ ಸಂಪರ್ಕ ಕಾಮಗಾರಿ ಒಡಿಶಾದ ಪಾರಾದೀಪ್ ಬಂದರು, ಆಂಧ್ರಪ್ರದೇಶ ವಿಶಾಖಪಟ್ಟಣ ಬಂದರು ಮತ್ತು ಮುಂಬೈನ ಜವಾಹರಲಾಲ್ ನೆಹರು ಬಂದರು ಟ್ರಸ್ಟ್ನಲ್ಲಿ ಪೂರ್ಣಗೊಂಡಿದೆ. ಉಳಿದಂತೆ ನವ ಮಂಗಳೂರು, ಕೋಲ್ಕತ್ತದ ಹಲ್ದಿಯಾ, ಚೆನ್ನೈ, ತೂತುಕುಡಿ, ಕೊಚ್ಚಿ, ಮರ್ಮಗೋವಾ, ಮುಂಬೈ, ಎಣ್ಣೂರು ಮತ್ತು ಕಾಂಡ್ಲಾ ಬಂದರುಗಳನ್ನು ಸಂಪರ್ಕಿಸುವ ಹೆದ್ದಾರಿ ಕಾಮಗಾರಿ ಬಾಕಿ ಇವೆ ಎಂದು ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಮೀಕ್ಷೆ ಖಾತೆ ರಾಜ್ಯ ಸಚಿವ ಸತ್ಯನಾರಾಯಣ ಲೋಕಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ವೇಳೆ ಮಾಹಿತಿ ನೀಡಿದರು.
531 ಕಂಪೆನಿಗಳಿಂದ ಅಕ್ರಮ
ದೇಶದ ವಿವಿಧೆಡೆಯ ಒಟ್ಟು 531 ಸಂಸ್ಥೆಗಳು ಹಣಕಾಸು ಲೆಕ್ಕಚಾರದ ನಿಯಮಗಳನ್ನು ಉಲ್ಲಂಘಿಸಿರುವುದು ಮತ್ತು ಅಕ್ರಮ ಹಣಕಾಸು ಚಟುವಟಿಕೆಗಳನ್ನು ನಡೆಸಿರುವುದು ಪತ್ತೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕಳೆದ ಮೂರು ವರ್ಷಗಳಲ್ಲಿ 427 ಕಂಪೆನಿಗಳು ಮತ್ತು 104 ಲೆಕ್ಕಪರಿಶೋಧಕ ಸಂಸ್ಥೆಗಳು ನಿಯಮಗಳನ್ನು ಉಲ್ಲಂಘಿಸಿರುವುದು ಮತ್ತು ಅಕ್ರಮ ಹಣಕಾಸು ಚಟುವಟಿಕೆ ನಡೆಸಿವೆ. ಈ ಎಲ್ಲ ಸಂಸ್ಥೆಗಳ ವಿರುದ್ಧ ಕಂಪೆನಿ ಕಾಯ್ದೆ-1956ರಡಿ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಕಂಪೆನಿ ವ್ಯವಹಾರಗಳ ಸಚಿವ ಸಚಿನ್ ಪೈಲಟ್ ಅವರು ರಾಜ್ಯಸಭೆಯಲ್ಲಿ ಸೋಮವಾರ ತಿಳಿಸಿದರು.
ಆದರೆ, ಯಾವ ಪ್ರಮಾಣದಲ್ಲಿ ಅಕ್ರಮ ಹಣಕಾಸು ನಡೆದಿದೆ. ಸರ್ಕಾರದ ಖಜಾನೆಗೆ ಎಷ್ಟು ನಷ್ಟವಾಗಿದೆ ಎಂಬ ವಿವರವನ್ನು ಸಚಿವರು ನೀಡಲಿಲ್ಲ.