ಹೈದರಾಬಾದ್, (ಪಿಟಿಐ): 48 ಗಂಟೆಗಳ ಬಂದ್ ಸಂದರ್ಭದಲ್ಲಿ ಎರಡನೇ ದಿನವಾದ ಬುಧವಾರವೂ ಆಂಧ್ರ ಪ್ರದೇಶದ ತೆಲಂಗಾಣ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ತೆಲಂಗಾಣ ಪರ ಹೋರಾಟ ನಡೆಸುತ್ತಿರುವ ಸಂಘಟನೆಗಳು ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಕುರಿತಂತೆ ಪ್ರಸಕ್ತ ಅಧಿವೇಶನದಲ್ಲೇ ಮಸೂದೆ ಮಂಡಿಸುವಂತೆ ಆಗ್ರಹಿಸಿ ಈ ಬಂದ್ ಗೆ ಕರೆ ನೀಡಿದ್ದವು.
ಶಾಲಾ ಕಾಲೇಜುಗಳು, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು, ಸಾರ್ವಜನಿಕ ರಸ್ತೆ ಸಾರಿಗೆ ವ್ಯವಸ್ಥೆಯಿಲ್ಲದೆ ಪ್ರಯಾಣೀಕರು ಪರದಾಡುವಂತಾಯಿತು. ರೈಲು, ಬಸ್ ಗಳಿಂದ ಹೈದರಾಬಾದಗೆ ಬಂದಿಳಿದ ಪರವೂರಿನಿಂದದ ಬಂದ ಪ್ರಯಾಣಿಕರು ತಮ್ಮತಮ್ಮ ಮನೆಗಳಿಗೆ ತೆರಳಲು ಕಷ್ಟಪಡಬೇಕಾಯಿತು.
ಪ್ರತ್ಯೇಕ ತೆಲಂಗಾಣ ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಚಳವಳಿ ಬೆಂಬಲಿಸಿರುವ ತೆಲಂಗಾಣ ಪ್ರದೇಶದ ಸರ್ಕಾರಿ ನೌಕರರು ಕೆಲಸದಲ್ಲಿ ಅಸಹಕಾರ ತೋರುತ್ತಿದ್ದಾರೆ.