ಗಂಗಾವತಿ: ಎಲ್ಲ ರಂಗಗಳಲ್ಲಿ ಹಿಂದುಳಿದಿರುವ ಹೈದರಾಬಾದ್ ಕರ್ನಾಟಕ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಅನುಕೂಲ ಆಗುವಂತೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಕಲ್ಮಠದ ಡಾ. ಕೊಟ್ಟೂರು ಸ್ವಾಮೀಜಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ತರುವಂತೆ ಒತ್ತಾಯಿಸಿ ಹೋರಾಟ ಸಮಿತಿಯು ಮಂಗಳವಾರ (ಜ. 24) ಆಯೋಜಿಸಿರುವ ಬಂದ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಗರದಲ್ಲಿ ವಿದ್ಯಾರ್ಥಿಗಳು ಸೋಮವಾರ ಹಮ್ಮಿಕೊಂಡ ಸೈಕಲ್ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೈದರಾಬಾದ್ ಕರ್ನಾಟಕದ ಐದು ಜಿಲ್ಲೆಗಳು ತೀರ ಹಿಂದುಳಿದಿವೆ. ರಾಜ್ಯದ ಇತರ ಜಿಲ್ಲೆಗಳ ಅಭಿವೃದ್ಧಿ ಅಂಕಿಅಂಶಗಳೊಂದಿಗೆ ಹೋಲಿಸಿದರೆ ಈ ಐದು ಜಿಲ್ಲೆಗಳು ಎದುರಿಸುತ್ತಿರುವ ಶೈಕ್ಷಣಿಕ, ನಿರುದ್ಯೋಗ, ರಾಜಕೀಯ ಮತ್ತು ಸಾಮಾಜಿಕ ತಾರಾತಮ್ಯ ಕಣ್ಣಿಗೆ ಕಟ್ಟಿದಂತೆ ಗೋಚರಿಸುತ್ತದೆ ಎಂದರು.
ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸವಲತ್ತು ನೀಡಲು ಕೇಂದ್ರ ಸರ್ಕಾರ ವಿಳಂಬ ಮಾಡುವ ಮೂಲಕ ಹಿಂದುಳಿದ ಪ್ರದೇಶದ ಜನರನ್ನು ಅಭಿವೃದ್ಧಿ ವಂಚಿತರನ್ನಾಗಿ ಮಾಡುತ್ತಿದೆ ಎಂದು ಆರೋಪಿಸಿದರು.
ಈ. ಧನರಾಜ, ರಾಮಣ್ಣ ನಾಯಕ, ಪಂಪಣ್ಣ ನಾಯಕ, ಯಂಕಪ್ಪ ಕಟ್ಟಿಮನಿ, ದೇವಪ್ಪ ಕಾಮದೊಡ್ಡಿ, ರಾಜೇಶ ಅಂಗಡಿ, ನಾಗರಾಜ, ಎ.ಕೆ. ಮಹೇಶ, ಬಸವರಾಜ ಕೋಟೆ, ಕೆ. ಲಿಂಗನಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.