ಲಿಂಗಸುಗೂರ: ಮುಂಬೈನ ಮಿಡ್ ಡೇ ಪತ್ರಿಕೆ ತನಿಖಾ ವರದಿಗಾರ ಜ್ಯೋತಿರ್ಮಯಿಡೇ ಹತ್ಯೆ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಸಮಾಜದ ಕಣ್ತೆರೆಸುವ ಕಾರ್ಯನಿರ್ವಹಿಸುವ ಪತ್ರಕರ್ತರನ್ನು ಹಾಡು ಹಗಲೆ ಕೊಲೆಗೈದಿರುವುದು ಪ್ರಜಾಪ್ರಭುತ್ವದ ಕಗ್ಗೋಲೆ ಮಾಡಿದಂತಾಗಿದೆ. ಕಾರಣ ಈ ಕೃತ್ಯ ಎಸಗಿದ ಆರೋಪಿತರನ್ನು ಬಂಧಿಸಿ ಕಠಿಣ ಕ್ರಮ ಕೈಕೊಳ್ಳುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ವೇದಿಕೆ ತಾಲ್ಲೂಕು ಘಟಕ ಬುಧವಾರ ಪ್ರತಿಭಟನೆ ನಡೆಸಿತು.
ಕೊಲೆಗೀಡಾದ ಪತ್ರಕರ್ತರ ಕುಟುಂಬಕ್ಕೆ ಸರ್ಕಾರ ರಕ್ಷಣೆ ನೀಡಬೇಕು. ಕುಟುಂಬದ ನಿರ್ವಹಣೆಗೆ ಅಗತ್ಯ ಪರಿಹಾರ ನೀಡಬೇಕು. ಪತ್ರಕರ್ತರ ಮೇಲೆ ನಡೆಯುವ ಪ್ರಕರಣಗಳನ್ನು ಪೊಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಬೇಕು. ಪ್ರತಿಯೊಂದು ಪ್ರಕರಣವನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸುವುದು ಸೇರಿದಂತೆ ಇತರೆ ಬೇಡಿಕೆ ಈಡೇರಿಸುವಂತೆ ರಾಷ್ಟ್ರಪತಿಗಳಿಗೆ ಬರೆದ ಮನವಿಯಲ್ಲಿ ಕೋರಿದ್ದಾರೆ.
ತಹಸೀಲ್ದಾರ ಎಂ.ರಾಚಪ್ಪ ಅವರ ಮೂಲಕ ವೇದಿಕೆ ಗೌರವಾಧ್ಯಕ್ಷ ಪಂಪಯ್ಯ ಮಠ, ಅಧ್ಯಕ್ಷ ಖಾಜಾಹುಸೇನ ಮನವಿ ಅರ್ಪಿಸಿದರು. ಪತ್ರಕರ್ತರಾದ ಚೌಡಯ್ಯ ನಾಯಕ, ಅಮರೇಶ ಬಲ್ಲಟಗಿ, ಅಮರೇಶ ಕಲ್ಲೂರು, ಶಿವರಾಜ ಕೆಂಭಾವಿ, ಗುರುರಾಜ ಗೌಡೂರು, ಲಕ್ಷ್ಮಣ ಬಾರಕೇರ, ಆರ್.ಮಾರುತೇಶ, ಮಲ್ಲೇಶ, ಬಲಭೀಮ, ಆನಂದ ತುರುವಿಹಾಳ, ದೇವಪ್ಪ ರಾಠೋಡ, ಶಿವಪುತ್ರ ಧನಶೆಟ್ಟಿ, ಅಮ್ಜದ ಕಂದಗಲ್ಲ ಪಾಲ್ಗೊಂಡಿದ್ದರು.