ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗರ್‌ಹುಕುಂ ರೈತರ ಬವಣೆ

Last Updated 23 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ತುಮಕೂರು: ಶಿರಾ ತಾಲ್ಲೂಕಿನ ಮೇಕೆರಹಳ್ಳಿಯ ಬಗರ್‌ಹುಕುಂ ಸಾಗುವಳಿದಾರ ತಿಮ್ಮರಾಜು ವಿಷ ಸೇವಿಸಿ ಸಾವಿಗೀಡಾದ ಘಟನೆ ರಾಜ್ಯದ ಬಗರ್‌ಹುಕುಂ ಸಾಗುವಳಿದಾರ ರೈತರ ಹೋರಾಟಕ್ಕೆ ಮತ್ತೊಮ್ಮೆ ಜೀವ ತಂದಿದೆ.

ರಾಜ್ಯದ ಇಪ್ಪತ್ತು ಜಿಲ್ಲೆಗಳಲ್ಲಿ ಬಗರ್‌ಹುಕುಂ ಸಾಗುವಳಿದಾರ ರೈತರ ಸಮಸ್ಯೆಗಳು ತೀವ್ರತರವಾಗಿವೆ. ಬೆಂಗಳೂರು, ಮೈಸೂರು, ಬೆಳಗಾವಿ ಸೇರಿದಂತೆ ಹತ್ತು ಜಿಲ್ಲೆಗಳನ್ನು ಹೊರತುಪಡಿಸಿ ಮಂಡ್ಯ, ಹಾಸನ, ಚಿಕ್ಕಮಗಳೂರು, ತುಮಕೂರು, ಶಿವಮೊಗ್ಗ ಸೇರಿ ಉಳಿದ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸಾಗುವಳಿದಾರರಿದ್ದಾರೆ. ಎರಡೂ ದಶಕಗಳಿಂದಲೂ ಭೂ ಮಂಜೂರಾತಿಗೆ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರಿ ಭೂಮಿ ಮರು ವಶಕ್ಕೆ ಪಡೆಯುವ ಸರ್ಕಾರದ ಈಚೆಗಿನ ಯತ್ನಗಳು ಸಾಗುವಳಿದಾರ ರೈತರ ಬದುಕನ್ನೇ ಆತಂಕಕ್ಕೆ ನೂಕಿದೆ.

ಗೋಮಾಳ, ಗುಂಡುತೋಪು ಸೇರಿ ಸರ್ಕಾರದ ಇನ್ನಿತರ ಭೂಮಿ ಹಂಚಿಕೆ ಸಂಬಂಧ ಹೈಕೋರ್ಟ್‌ನ ದ್ವಿಸದಸ್ಯ ಪೀಠ ನೀಡಿದ ತೀರ್ಪು ಬಗರ್‌ಹುಕುಂ ಸಾಗುವಳಿದಾರ ಭೂಮಿ ಹಂಚಿಕೆಯನ್ನೇ ಕಗ್ಗಂಟಾಗಿಸಿದೆ. ಕೋರ್ಟ್ ಆದೇಶದ ಪ್ರಕಾರ ಗ್ರಾಮಗಳಿರುವ ಜಾನುವಾರು ಸಂಖ್ಯೆಗೆ ಅಗತ್ಯವಾದಷ್ಟು ಪ್ರಮಾಣದ ಭೂಮಿ ಕಾದಿರಿಸಿ ಉಳಿಕೆ ಭೂಮಿ ಮಾತ್ರ ಹಂಚಿಕೆ ಮಾಡಬೇಕು. ಆದರೆ ವಾಸ್ತವದಲ್ಲಿ ಭೂಮಿಗಿಂತ ಜಾನುವಾರುಗಳ ಸಂಖ್ಯೆಯೇ ಹೆಚ್ಚಿರುವುದರಿಂದ ಭೂ ರಹಿತರಿಗೆ ಭೂಮಿ ಸಿಗದಂತಾಗಿದೆ.

ಅನಧಿಕೃತ ಸಾಗುವಳಿ
ಬಗರ್‌ಹುಕುಂ ಉರ್ದು ಭಾಷೆ ಪದ. ಬಗರ್‌ಹುಕುಂ ಎಂದರೆ ಅನಧಿಕೃತ ಸಾಗುವಳಿ ಎಂದರ್ಥ. ಸರ್ಕಾರಿ ಗೋಮಾಳ, ಅರಣ್ಯ ಇಲಾಖೆ, ಕಂದಾಯ ಇಲಾಖೆಯ ಭೂಮಿಯಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುವ ರೈತರು ಬಗರ್‌ಹುಕುಂ ಸಾಗುವಳಿದಾರರು. ಕಂದಾಯ ಇಲಾಖೆಯಲ್ಲಿ ಬಳಸುವ ಅನೇಕ ಪರಿಭಾಷೆಗಳಲ್ಲಿ ಇದೂ ಒಂದಾಗಿದೆ.
1964ರಲ್ಲಿ ಜಾರಿಗೆ ಬಂದ ಕರ್ನಾಟಕ ಭೂ ಮಂಜೂರಾತಿ ಅಧಿನಿಯಮದಲ್ಲಿ ಬಗರ್‌ಹುಕುಂ ಭೂ ಮಂಜೂರಾತಿ ಕುರಿತು ಹೇಳಲಾಗಿದೆ. ಭೂ ಮಂಜೂರಾತಿ ಅಧಿಕಾರ ಈ ಹಿಂದೆ ತಹಶೀಲ್ದಾರ್ ಬಳಿ ಇತ್ತು. ಈಗ ಈ ಅಧಿಕಾರ ಶಾಸಕರ ಅಧ್ಯಕ್ಷತೆಯ ಬಗರ್‌ಹುಕುಂ ಸಮಿತಿಗೆ ನೀಡಲಾಗಿದೆ.
ಊಳುವವನೇ ಭೂ ಒಡೆಯ ಕಾಯ್ದೆ ಜಾರಿಯೊಂದಿಗೆ ಬಗರ್‌ಹುಕುಂ ಸಾಗುವಳಿದಾರರು ಹುಟ್ಟಿಕೊಂಡರು. ಆಯಾಯ ಗ್ರಾಮಗಳಲ್ಲಿ ಖಾಲಿ ಇದ್ದ, ಫಲವತ್ತಾದ ಭೂಮಿಯನ್ನು ರೈತರು ಉಳುಮೆ ಮಾಡ ತೊಡಗಿದರು. ಈ ರೀತಿ ಉಳುಮೆ ಮಾಡುತ್ತಿದ್ದ ಭೂಮಿಯನ್ನು ಮಂಜೂರು ಮಾಡುವಂತೆ ಹುಟ್ಟಿಕೊಂಡ ಹೋರಾಟವೇ ಬಗರ್‌ಹುಕುಂ ಸಾಗುವಳಿದಾರರ ಹೋರಾಟ.
ಬಗರ್‌ಹುಕುಂ ಸಮಿತಿಗೆ ಆಯಾಯ ಕ್ಷೇತ್ರದ ಶಾಸಕರು ಅಧ್ಯಕ್ಷರಾಗಿರುತ್ತಾರೆ. ತಹಶೀಲ್ದಾರ್ ಸದಸ್ಯ ಕಾರ್ಯದರ್ಶಿ. ಉಳಿದ ಸದಸ್ಯರನ್ನು ಸರ್ಕಾರ ನೇಮಕ ಮಾಡುತ್ತದೆ. ಸರ್ಕಾರ ಬದಲಾದಾಗ ಸದಸ್ಯರು ಬದಲಾಗುತ್ತಾರೆ. ಆಯಾಯ ಪಕ್ಷದ ಕಾರ್ಯಕರ್ತರನ್ನೇ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡುವ ಸಂಪ್ರದಾಯ ಬೆಳೆದುಬಂದಿದೆ. ಹೀಗಾಗಿಯೇ ಭೂ ಮಂಜೂರಾತಿ ನೀಡುವಲ್ಲಿ ಅಕ್ರಮ, ಸ್ವಜನ ಪಕ್ಷಪಾತಕ್ಕೆ ಕಾರಣವಾಗಿದೆ
.

ರಾಜ್ಯದಲ್ಲಿ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ 1986ರಲ್ಲೇ ಬಗರ್‌ಹುಕುಂ ಸಾಗುವಳಿದಾರರ ಚಳವಳಿ ಆರಂಭಗೊಂಡಿತ್ತು. ಚಳವಳಿಯ ತೀವ್ರತೆ ಗಮನಿದ ಸರ್ಕಾರ ಭೂ ಸಕ್ರಮಕ್ಕೆ 1991 ಹಾಗೂ 1997ರಲ್ಲಿ ಅರ್ಜಿ ಕರೆದಿತ್ತು.

ಈ ಎರಡು ಅವಧಿಯಲ್ಲಿ 30 ಲಕ್ಷ ಸಾಗುವಳಿದಾರರು ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲನೆ ಬಳಿಕ 16 ಲಕ್ಷ ಬಗರ್‌ಹುಕುಂ ಸಾಗುವಳಿದಾರನ್ನು ಸರ್ಕಾರವೇ ಗುರುತಿಸಿತ್ತು.

ಇಲ್ಲಿಯವರೆಗೂ 12 ಲಕ್ಷ ಸಾಗುವಳಿದಾರರಿಗೆ ಭೂಮಿ ಹಂಚಲಾಗಿದೆ. ಬಗರ್‌ಹುಕುಂ ಅಡಿ ಒಬ್ಬರಿಗೆ ಐದು ಎಕರೆಯವರೆಗೂ ಭೂಮಿ ಮಂಜೂರು ಮಾಡಬಹುದು.

ಆದರೆ ಒಂದೂವರೆಯಿಂದ ಎರಡು ಎಕರೆ ಸಾಗುವಳಿ ಮಾಡಿಕೊಂಡಿರುವ ರೈತರ ಸಂಖ್ಯೆಯೇ ಹೆಚ್ಚಿದೆ. ರಾಜ್ಯದಲ್ಲೆಗ 4 ಲಕ್ಷ ಬಗರ್‌ಹುಕುಂ ಸಾಗುವಳಿದಾರರು ಭೂ ಮಂಜೂರಾತಿಗಾಗಿ ಕಳೆದ ಇಪ್ಪತ್ತು ವರ್ಷಗಳಿಂದ ಅಲೆಯುತ್ತಿದ್ದಾರೆ.

ಸರ್ಕಾರಿ ಭೂಮಿ ಅತಿಕ್ರಮಣ ಸಂಬಂಧ ಎ.ಟಿ.ರಾಮಸ್ವಾಮಿ ಸಮಿತಿ ನೀಡಿದ ವರದಿ ಬಳಿಕ 2007ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಜಾರಿಗೆ ತಂದ ಭೂ ಅತಿಕ್ರಮಣ ನಿಯಂತ್ರಣ ಕಾಯ್ದೆಯು ಬಗರ್ ಹುಕುಂ ಸಾಗುವಳಿದಾರರ ಕನಸನ್ನೇ ನುಚ್ಚು ನೂರಾಗಿಸಿದೆ ಎಂಬುದು ರೈತ ಸಂಘಟನೆಗಳ ಆರೋಪ.

ಬಗರ್‌ಹುಕುಂ ಸಾಗುವಳಿದಾರರ ಭೂ ಸಕ್ರಮಕ್ಕೆ ಒತ್ತಾಯಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರೋಧ ಪಕ್ಷದಲ್ಲಿದಾಗ ಶಿಕಾರಿಪುರದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿದ್ದರು.
 
ಆದರೆ ಅವರ ಪಕ್ಷ ಅಧಿಕಾರಕ್ಕೆ ಬಂದಾಗ ಸಾಗುವಳಿದಾರರ ಹಿತ ಕಡೆಗಣಿಸಲಾಯಿತು ಎಂದೂ ಮಾನ್ಪಡೆ ದೂರುತ್ತಾರೆ.ಶಾಸಕರ ಅಧ್ಯಕ್ಷತೆಯಲ್ಲಿ ಬಗರ್ ಹುಕುಂ ಸಮಿತಿ ಇದ್ದರೂ ಅದರಿಂದ ಪ್ರಯೋಜವಿಲ್ಲ. ಭೂ ಹಂಚಿಕೆ ಮಾಡದಂತೆ ಕಾನೂನು ಕೈಕಟ್ಟಿ ಹಾಕಿದೆ. ಬಗರ್‌ಹುಕುಂ ಸಾಗುವಳಿದಾರರು ಬಹುತೇಕರು ಪರಿಶಿಷ್ಟ ಪಂಗಡ, ಜಾತಿ ಹಾಗೂ ಅಲ್ಪಸಂಖ್ಯಾತರು.



ಅವರು ಸತ್ತರೂ ಹೂಳಲು ಅವರ ಬಳಿ ಆರಡಿ ಜಮೀನು ಇಲ್ಲ. ಹತ್ತಿಪ್ಪತ್ತು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲೇ ಇದ್ದುಕೊಂಡು ತೋಟ ಮಾಡಿಕೊಂಡಿದ್ದಾರೆ. ಈಗ ಅವರನ್ನೆಲ್ಲ ಒಕ್ಕಲೆಬ್ಬಿಸಬೇಕಾಗಿದೆ. ಬೇರೆ ದಾರಿ ಕಾಣದೆ ರೈತರು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಮಾನವೀಯತೆ ಆಧಾರದಲ್ಲಿ ಈಗಿರುವ ಎಲ್ಲ ಬಗರ್‌ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಲು ಕಾನೂನು ತಿದ್ದುಪಡಿ ಮಾಡುವುದಷ್ಟೇ ಪರಿಹಾರ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಅಭಿಪ್ರಾಯಪಡುತ್ತಾರೆ.

ಭೂ ಕಾಯ್ದೆಗೆ ತಿದ್ದುಪಡಿ ಅಗತ್ಯ
ಶ್ರೀಮಂತ ರೈತರು, ಭೂಗಳ್ಳರು ಹಾಗೂ ಬಗರ್‌ಹುಕುಂ ಸಾಗುವಳಿದಾರರ ನಡುವಿನ ವ್ಯತ್ಯಾಸ ಗುರುತಿಸದ ಈ ಕಾಯ್ದೆ ಸರ್ಕಾರಿ ಭೂಮಿಯಲ್ಲಿ ಇರುವವರೆಲ್ಲರೂ ಭೂಗಳ್ಳರೆಂದೇ ಹೇಳಿದೆ. ಹೀಗಾಗಿ ಬಗರ್‌ಹುಕುಂ ರೈತರು ಕೂಡ ಭೂಗಳ್ಳರ ಸಾಲಿನಲ್ಲಿ ಸೇರುವಂತಾಗಿದೆ.

ಸರ್ಕಾರಿ ಭೂಮಿ ವಶಕ್ಕೆ ಪಡೆಯುವ ಎ.ಟಿ.ರಾಮಸ್ವಾಮಿ, ಬಾಲಸುಬ್ರಹ್ಮಣ್ಯಂ ವರದಿ ಜಾರಿಯ ಯತ್ನಗಳೇ ಈಗ ಬಗರ್‌ಹುಕುಂ ಸಾಗುವಳಿದಾರರು ವಿಷ ಸೇವಿಸುವ ಹಂತಕ್ಕೆ ತೆಗೆದುಕೊಂಡು ಹೋಗಿದೆ. ಸರ್ಕಾರ ಭೂ ಕಾಯ್ದೆಗೆ ತಿದ್ದುಪಡಿ ತಂದು ಕೂಡಲೇ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು.
ಮಾರುತಿ ಮಾನ್ಪಡೆ, (ಪ್ರಾಂತ ರೈತ ಸಂಘದ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT