ನವದೆಹಲಿ (ಪಿಟಿಐ): 2012-13ನೇ ಸಾಲಿನ ಬಜೆಟ್ನಲ್ಲಿ ಅಬಕಾರಿ ಮತ್ತು ಸೇವಾ ತೆರಿಗೆ ಹೆಚ್ಚಿಸಬಾರದು ಎಂದು ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ) ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಬಡ್ಡಿ ದರ ಹೆಚ್ಚಿಸುವುದು ಉದ್ಯಮದ ಪ್ರಗತಿಗೆ ಹಿನ್ನಡೆ ತರಲಿದೆ. ಕೈಗಾರಿಕಾ ಪ್ರಗತಿಗೆ ಉತ್ತೇಜನ ನೀಡಲು ಸೀಮಾ ಸುಂಕ ಕಡಿತಗೊಳಿಸುವ ಕುರಿತೂ ಸರ್ಕಾರ ಚಿಂತಿಸಬೇಕು ಎಂದು `ಸಿಐಐ~ ಹಣಕಾಸು ಸಚಿವಾಲಯಕ್ಕೆ ಸಲ್ಲಿಸಿರುವ ಬಜೆಟ್ ಪೂರ್ವ ಮನವಿಯಲ್ಲಿ ಆಗ್ರಹಿಸಿದೆ. ಕೈಗಾರಿಕೆ ಮತ್ತು ತಯಾರಿಕೆ ಕ್ಷೇತ್ರದ ವೃದ್ಧಿ ದರ ಕುಸಿತದಿಂದ ದೇಶದ ವಿತ್ತೀಯ ಕೊರತೆಯು `ಜಿಡಿಪಿ~ಯ ಶೇ 4.6ಅನ್ನು ದಾಟುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ತೆರಿಗೆ ಹೆಚ್ಚಳಕ್ಕೆ ಮುಂದಾಗಬಾರದು ಎಂದಿದೆ.
ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಷೇರು ವಿಕ್ರಯ ಮತ್ತು ಸಬ್ಸಿಡಿಗೆ ಸಂಬಂಧಿಸಿದಂತೆ ಸಚಿವಾಲಯವು 5 ವರ್ಷಗಳ ನೀಲಿನಕ್ಷೆಯೊಂದನ್ನು ಸಿದ್ಧಪಡಿಸಬೇಕು ಎಂದೂ `ಸಿಐಐ~ ಸಲಹೆ ಮಾಡಿದೆ.