ನವದೆಹಲಿ (ಪಿಟಿಐ): ಸೋಮವಾರ ಮಂಡನೆಯಾಗಲಿರುವ 2011-12ನೇ ಸಾಲಿನ ಕೇಂದ್ರ ಸರ್ಕಾರದ ಮುಂಗಡ ಪತ್ರವು ಷೇರುಪೇಟೆಯ ಹಣೆಬರಹ ನಿರ್ಧರಿಸುವ ನಿರೀಕ್ಷೆ ಇದೆ.
ಸದ್ಯಕ್ಕೆ ಹಣದುಬ್ಬರ, ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದಲ್ಲಿನ ರಾಜಕೀಯ ಬಿಕ್ಕಟ್ಟಿನ ಪ್ರಭಾವಕ್ಕೆ ಸಿಲುಕಿರುವ ಷೇರುಪೇಟೆ ವಹಿವಾಟಿಗೆ ಬಜೆಟ್ ಚೇತರಿಕೆ ನೀಡವುದೇ ಎನ್ನುವುದನ್ನು ಎದುರು ನೋಡಲಾಗುತ್ತಿದೆ. ಈ ವಾರ ಷೇರುಪೇಟೆಯ ವಹಿವಾಟಿನ ದಿಕ್ಕನ್ನು ನಿರ್ಧರಿಸುವಲ್ಲಿ ಬಜೆಟ್ ಪ್ರಮುಖ ಪಾತ್ರ ನಿರ್ವಹಿಸುವ ಸಾಧ್ಯತೆಗಳು ಇವೆ. ಸದ್ಯಕ್ಕೆ ವಹಿವಾಟಿನ ಸ್ವರೂಪ ಬದಲಿಸುವ ಏಕೈಕ ವಿದ್ಯಮಾನವು ಬಜೆಟ್ ಮಂಡನೆಯಾಗಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ನ ಅಧ್ಯಕ್ಷ ಮೋತಿಲಾಲ್ ಓಸ್ವಾಲ್ ಹೇಳಿದ್ದಾರೆ.
ಕಳೆದ ವಾರ ಪ್ರಕಟಗೊಂಡ ರೈಲ್ವೆ ಬಜೆಟ್ ಮತ್ತು ಆರ್ಥಿಕ ಸಮೀಕ್ಷೆಗಳಿಂದ ಪೇಟೆ ಮೇಲೆ ಯಾವುದೇ ಪ್ರಭಾವ ಕಂಡು ಬಂದಿಲ್ಲ. ಕ್ಷಮಾದಾನ ಯೋಜನೆ, ಕೃಷಿಗೆ ಹೆಚ್ಚು ಆದ್ಯತೆ ನೀಡುವ ಮತ್ತು ಮೂಲ ಸೌಕರ್ಯ ಯೋಜನೆಗಳಿಗೆ ಸಂಪನ್ಮೂಲ ಕ್ರೋಡೀಕರಣಗೊಳಿಸುವುದು ಇನ್ನಷ್ಟು ಸರಳಗೊಳಿಸುವ ಕ್ರಮಗಳು ಷೇರುಪೇಟೆಯಲ್ಲಿ ಉತ್ಸಾಹ ಮೂಡಿಸುವ ಸಾಧ್ಯತೆಗಳಿವೆ.