ಮಡಿಕೇರಿ: ಮಡಿಕೇರಿ ದಸರಾಗೆ ರೂ 75 ಲಕ್ಷ ಬಿಡುಗಡೆ ಮಾಡಲು ಸರ್ಕಾರ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ಮಡಿಕೇರಿ ದಸರಾ ಕಾರ್ಯಕ್ರಮಕ್ಕೆ ತಾತ್ಕಾಲಿಕವಾಗಿ ಬಜೆಟ್ ತಯಾರಿಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ಈಚೆಗೆ ಸಭೆ ನಡೆಯಿತು.
ಗಾಂಧಿ ಮೈದಾನದಲ್ಲಿ 10 ದಿನಗಳ ಕಾಲ ನಡೆಯುವ ಸಾಂಸ್ಕೃತಿಕ, ಕವಿಗೋಷ್ಠಿ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ವೇದಿಕೆ ನಿರ್ಮಾಣ, ಬೆಳಕು ಮತ್ತು ಧ್ವನಿ ಸಮರ್ಪಕ ವ್ಯವಸ್ಥೆ, ವೇದಿಕೆಯಲ್ಲಿ ಆಸನ ವ್ಯವಸ್ಥೆ ಮಾಡುವುದು. ವಿವಿಧ ಕಾರ್ಯಕ್ರಮಗಳಿಗೆ ಅತಿಥಿಗಳನ್ನು ಆಹ್ವಾನಿಸುವುದು, ಆಹ್ವಾನ ಪತ್ರಿಕೆ ಮುದ್ರಣ, ದಸರಾ ಸಂದರ್ಭದಲ್ಲಿ ವಿಶೇಷ ಸಂಚಿಕೆ ಸೇರಿದಂತೆ ನಾನಾ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಮಡಿಕೇರಿ ನಗರವನ್ನು ದಸರಾ ಸಂದರ್ಭದಲ್ಲಿ ಕಟ್ಟಡಗಳ ಸ್ವಚ್ಛತೆ ಕಾಪಾಡಲು ನಗರಸಭಾ ಆಯುಕ್ತ ಎನ್.ಎಂ. ಶಶಿಕುಮಾರ್ ಅವರು ಮನವಿ ಮಾಡಿದರು. ದಸರಾ ಸಮಿತಿಯ ಗೌರವ ಅಧ್ಯಕ್ಷ ಜಿ. ಚಿದ್ವಿಲಾಸ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ., ಕವಿಗೋಷ್ಠಿ ಸಮಿತಿ ಅಧ್ಯಕ್ಷ ಶಶಿಸೋಮಯ್ಯ, ಗೌರವಾಧ್ಯಕ್ಷ ವಿ.ಪಿ. ಸುರೇಶ್, ಕೋಡಿ ಚಂದ್ರಶೇಖರ್, ಚುಮ್ಮಿ ದೇವಯ್ಯ, ಉದಯಕುಮಾರ್ ಮತ್ತಿತರರು ಹಲವು ಸಲಹೆಗಳನ್ನು ನೀಡಿದರು.
ಮಡಿಕೇರಿ ದಸರಾ ಸಮಿತಿ ಸಭೆಯು ಸಮಿತಿಯ ಕಾರ್ಯಧ್ಯಕ್ಷ ಕೆ.ಎಂ. ಗಣೇಶ್, ದಸರಾ ಸಮಿತಿ ಉಪಾಧ್ಯಕ್ಷ ಮಂಜುನಾಥ್, ದಸರಾ ಮಂಟಪ ಸಮಿತಿ ಅಧ್ಯಕ್ಷ ವಿನೋದ್ ಹಾಜರಿದ್ದರು.
ದಸರಾ ಸಿದ್ಧತೆ ಸಭೆ ನಾಳೆ: ಮಡಿಕೇರಿ ಜನೋತ್ಸವ ದಸರಾ ಪೂರ್ವ ತಯಾರಿ ಸಂಬಂಧಿಸಿದಂತೆ ದಸರಾ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಕಾರ್ಯಾಧ್ಯಕ್ಷ ಕೆ.ಎಂ. ಗಣೇಶ್ ಹಾಗೂ ನಾನಾ ಉಪಸಮಿತಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸೆ. 21ರಂದು ಮಧ್ಯಾಹ್ನ 3 ಗಂಟೆಗೆ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ದಸರಾ ಪೂರ್ವ ಸಿದ್ಧತೆ ಬಗ್ಗೆ ಪರಿಶೀಲನಾ ಸಭೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.