ಇನ್ನು ಮುಂದೆ ಸರ್ಕಾರಿ ಸಿಇಟಿ ಪರೀಕ್ಷೆಯು 21 ಎಂಜಿನಿಯರಿಂಗ್ ಮತ್ತು 10 ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ಮಾತ್ರ ಸೀಮಿತವಾಗಲಿದೆ. ಅನುದಾನರಹಿತ ಖಾಸಗಿ ಕಾಲೇಜುಗಳ ಪ್ರವೇಶ ಬಯಸುವ ವಿದ್ಯಾರ್ಥಿಗಳ ಆಸೆಯನ್ನು ಅತ್ಯಂತ ಕ್ರೂರವಾಗಿ ಹೊಸಕಿಹಾಕಲು ಸರ್ಕಾರ ಮುಂದಾಗಿದೆ. ಸಮಾಜವಾದಿ ಚಳವಳಿಯ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯ ಸರ್ಕಾರದಿಂದ ಇಂಥ ಕ್ರಮವನ್ನು ಖಂಡಿತ ನಿರೀಕ್ಷಿಸಿರಲಿಲ್ಲ.
ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಅಡಿ ಇದುವರೆಗೆ ಸೀಟು ಲಭ್ಯವಿದ್ದ ಕಾರಣ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ವೃತ್ತಿಶಿಕ್ಷಣದ ಕನಸು ಕಾಣುತ್ತಿದ್ದರು. ಅದನ್ನು ನನಸಾಗಿಸಲು ಕಷ್ಟಪಟ್ಟು ಓದುತ್ತಿದ್ದರು. ಇನ್ನುಮುಂದೆ ಕಷ್ಟಪಟ್ಟು ಓದುವುದು ಕೂಡ ನಿರರ್ಥಕವಾಗಲಿದೆ. ಆ ಕಾಲೇಜುಗಳ ಪ್ರವೇಶ ಶುಲ್ಕ ಭರಿಸುವ ಸಾಮರ್ಥ್ಯ ನಮ್ಮಂಥ ಸಹಸ್ರಾರು ಕುಟುಂಬಗಳಿಗೆ ಇಲ್ಲ.
ರಾಜ್ಯ ಸರ್ಕಾರ ದಶಕಗಳ ಹಿಂದೆ ಜಾರಿಗೆ ತಂದ ಸಿಇಟಿ ರಾಷ್ಟ್ರಕ್ಕೇ ಮಾದರಿಯಾಗಿತ್ತು. ಸಾಮಾಜಿಕ ನ್ಯಾಯವನ್ನು ನಿಜ ಅರ್ಥದಲ್ಲಿ ಈಡೇರಿಸುತ್ತಿತ್ತು. ಆದರೆ ಇಂದಿನ ಸರ್ಕಾರ ಕೈಗೊಂಡಿರುವ ನಿರ್ಧಾರ ಜನವಿರೋಧಿ. ಹೀಗೆಂದು ಹೇಳದೆ ವಿಧಿಯಿಲ್ಲ. ಸನ್ಮಾನ್ಯ ಮುಖ್ಯಮಂತ್ರಿಯವರೇ, ನಿಮ್ಮ ಸರ್ಕಾರ ಕೈಗೊಂಡಿರುವ ಈ ನಿರ್ಧಾರದಿಂದ ಸಾಮಾಜಿಕ ನ್ಯಾಯವೂ ಈಡೇರುವುದಿಲ್ಲ, ದುರ್ಬಲ ವರ್ಗಗಳ ಏಳ್ಗೆಯೂ ಆಗುವುದಿಲ್ಲ. ದಯವಿಟ್ಟು ಈ ನಿರ್ಧಾರದಿಂದ ಹಿಂದೆ ಸರಿಯಿರಿ.