ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ ಹೆಣ್ಣಿಗೆ ಭರವಸೆಯ ಕಿರಣ

Last Updated 10 ಡಿಸೆಂಬರ್ 2012, 21:01 IST
ಅಕ್ಷರ ಗಾತ್ರ

ಅವರೆಲ್ಲರೂ ಗಡಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಸೇರಿದ ವಿದ್ಯಾರ್ಥಿನಿಯರು. ಹೇಳಿಕೇಳಿ ಶೈಕ್ಷಣಿಕ ಪ್ರಗತಿ ಕಾಣದ ಜಿಲ್ಲೆ. ಹುಟ್ಟಿನೊಂದಿಗೆ ಬಡತನವೂ ಇತ್ತು. ವಯಸ್ಸಿಗೆ ಬಂದಿದ್ದಾರೆ ಎಂದು ಅನಿಸಿದಂತೆ ಮದುವೆ ಮಾಡಿಬಿಡುವ ಪೋಷಕರ ಮನೋಭಾವ. ಮದುವೆಯಾದರೆ ವಾಸ್ತವ ಬದುಕು ಅರಿವಾಗುವ ಮುನ್ನವೇ ಮಡಿಲಲ್ಲಿ ಮಕ್ಕಳು.

ಗಡಿ ಜಿಲ್ಲೆಯಲ್ಲಿನ ಬಡತನದ ಕಾರಣದಿಂದ ಶಿಕ್ಷಣ ಮುಂದುವರಿಸಲಾಗದ ಇಂಥ ಮಕ್ಕಳಲ್ಲಿ ಬದುಕಿನ ಹೊಸ ಭರವಸೆ ಮೂಡಿಸುವ ಉದ್ದೇಶದೊಂದಿಗೆ ಆರಂಭವಾದ ವಸತಿ ಸಹಿತ ತರಬೇತಿ ಕೇಂದ್ರ ಆ ನಿಟ್ಟಿನಲ್ಲಿ ಯಶಸ್ಸನ್ನುಕಂಡಿದೆ. ಇರುವ ಮಕ್ಕಳಲ್ಲಿ ಉತ್ತಮ ಬದುಕು ಸಿಗುವ ವಿಶ್ವಾಸ ಮೂಡಿದಂತೇ ಕೆಲ ಪೋಷಕರೇ ಮಕ್ಕಳನ್ನು ಕರೆತಂದು ಸೇರಿಸ್ದ್ದಿದಾರೆ.

ಇದು, ಬೀದರ್ ಹೊರವಲಯದ ಹಳ್ಳದಕೇರಿಯಲ್ಲಿರುವ ಕಾರ್ಮೆಲ್ ವೃತ್ತಿ ತರಬೇತಿ ಕೇಂದ್ರ. ಪ್ರಸ್ತುತ ಇಲ್ಲಿ ಸುಮಾರು 130 ವಿದ್ಯಾರ್ಥಿನಿಯರಿದ್ದಾರೆ. ಎಸ್‌ಎಸ್‌ಎಲ್‌ಸಿ ನಪಾಸಾದವರು, ಮುಂದೆ ಶಿಕ್ಷಣ ಮುಂದುವರಿಸಲಾಗದ ಸ್ಥಿತಿಯಲ್ಲಿ ಇರುವವರು ಇದ್ದಾರೆ. ಎಸ್‌ಎಸ್‌ಎಲ್‌ಸಿ, ಪಿಯುಸಿಗೆ ಸಿದ್ಧವಾುವ ಜೊತೆಗೆ ವೃತ್ತಿ ತರಬೇತಿಯೂ ಆಗುತ್ತಿದೆ.

ಇರುವ ವಿದ್ಯಾರ್ಥಿಗಳಲ್ಲಿ ಕೆಲವರ ಮಾತೃಭಾಷೆ ಕನ್ನಡ, ಇನ್ನೂ ಕೆಲವರದು ಮರಾಠಿ. ಗಡಿ ಜಿಲ್ಲೆಯಲ್ಲಿ ಇರುವ ಕಾರಣ ಹಿಂದಿ ಕರಗತವಾಗಿದೆ. ಗುಣಮಟ್ಟದ ಶಿಕ್ಷಣ, ತರಬೇತಿ ಕೊಡಿಸುವ ಉದ್ದೇಶದೊಂದಿಗೆ ಕೇಂದ್ರವು ಮಂಗಳೂರಿನ ತನ್ನ ಕೇಂದ್ರಗಳಿಗೆ ಅಲ್ಪಾವಧಿಗೆ ಕಳುಹಿಸಿಕೊಡುವ ಕಾರಣ ಕೆಲವರು ಕೊಂಕಣಿಯನ್ನು ಮಾತನಾಡುತ್ತಾರೆ!

ಕೆಂದ್ರದ ಪ್ರೇರಕ ಶಕ್ತಿ
ಮಂಗಳೂರಿನಿಂದ 14 ವರ್ಷದ ಹಿಂದೆ ಗಡಿಜಿಲ್ಲೆಗೆ ಬಂದು ನೆಲಸಿದ ಸಿಸ್ಟರ್ ಕ್ರಿಸ್ಟಿನಾ ಮಿಸ್ಕಿತ್ ಈ ಕೇಂದ್ರದ ಪ್ರೇರಕರು. `ವಿದ್ಯಾರ್ಥಿಗಳು ಪ್ರತಿಭಾವಂತರೆ ಇದ್ದಾರೆ. ಅವರಿಗೆ ಅವಕಾಶ ಸಿಗಬೇಕು ಅಷ್ಟೇ. ಹೆಚ್ಚಿನ ವಿದ್ಯಾರ್ಥಿಗಳ ಪಾಲಿಗೆ ಅವರ ಮದುವೆಯಾಗುವುದು ಎರಡು ವರ್ಷ ಮುಂದಕ್ಕೆ ಹೋಗಿದೆ ಎಂಬುದೇ ಕೇಂದ್ರ ದೊಡ್ಡ ಸಾಧನೆ' ಎನ್ನುತ್ತಾರೆ ಅವರು.

ನಗರ ಹೊರವಲಯದ ಶಹಾಪುರ ಗೇಟ್‌ನಲ್ಲಿರುವ ಕೇಂದ್ರದ ಆವರಣಕ್ಕೆ ಹೋದರೆ ಹಸಿರು ಪರಿಸರದ ನಡುವೆ ಅಲ್ಲಲ್ಲಿ ವಿಶ್ವಾಸದಿಂದ ಗುಂಪಾಗಿ ಅಭ್ಯಾಸ ಮಾಡುತ್ತಿರುವ  ವಿದ್ಯಾರ್ಥಿನಿಯರ ಸಮೂಹ, ಒಳಹೊಕ್ಕರೆ ಹೊಲಿಗೆ ತರಬೇತಿ, ಟೈಪಿಂಗ್, ಕಂಪ್ಯೂಟರ್ ತರಬೇತಿಯಲ್ಲಿ ನಿರತರಾದ ವಿದ್ಯಾರ್ಥಿಯರ ತಂಡ ಕಾಣಿಸುತ್ತಿತ್ತದೆ.

ಎಲ್ಲರಿಗೂ ಅವಕಾಶವಿದ್ದರೂ ಪರಿಶಿಷ್ಟ, ಹಿಂದುಳಿದ ವರ್ಗಕ್ಕೆ ಸೇರಿದ ಯುವತಿಯರೇ ಇದ್ದಾರೆ. ಇಲ್ಲಿ ಹೀಗೇ ಕಲಿಯಲು 5-6 ವರ್ಷದ ಹಿಂದೆ ಬಂದ ಯುವತಿಯರೇ ಇಂದು ಅಲ್ಲಿಯ ಸಿಬ್ಬಂದಿಯೂ ಆಗಿದ್ದಾರೆ. ಟೈಪಿಂಗ್, ಕಂಪ್ಯೂಟರ್ ಕೇಂದ್ರದ ಮೇಲ್ಚಿಚಾರಣೆಯನ್ನು ಯಶಸ್ವಿಯಾಗಿ ನೋಡಿ ಕೊಳ್ಳುತ್ತಿದ್ದಾರೆ.

`ಇಂಥ ಪರಿಸರದಲ್ಲಿ ಇದ್ದು, ನೋಡಿಕೊಳ್ಳಲು ಅವರಿಗೆ ಮುಖ್ಯವಾಗಿ ಬಡತನದ ಅರಿವು ಇರಬೇಕು. ಹೀಗಾಗಿ, ಇಲ್ಲಿ ಕಲಿತವನ್ನೇ ಆದ್ಯತೆಯ ಮೇಲೆ ಕೆಲಸಕ್ಕೆ ನೇಮಿಸಿದ್ದೇವೆ. ಏಕೆಂದರೆ, ಅವರಿಗೆ ತನ್ನಂತೆ ಇದ್ದ ಮಕ್ಕಳ ಕಷ್ಟ, ಅಗತ್ಯಗಳ ಅರಿವು ಇರುತ್ತದೆ' ಎನ್ನುತ್ತಾರೆ ಸಿಸ್ಟರ್ ಕ್ರಿಸ್ಟೀನಾ.

ವಿದ್ಯಾರ್ಥಿನಿಯರನ್ನು ಸೇರಿಸಲು ಮಿತಿ ಇಲ್ಲ. ತರಬೇತಿಗಾಗಿ ಮಾಸಿಕ ರೂ. 400 ಶುಲ್ಕ ನಿಗದಿಸಿದ್ದೇವೆ. ಉಳಿದಂತೆ, ವಿದ್ಯಾರ್ಥಿಗಳಿಗೆ ಎರಡು ವರ್ಷದ ಕಾಲ ವಸತಿ, ಊಟದ ವ್ಯವಸ್ಥೆ ಇರುತ್ತದೆ. ವಿದ್ಯಾರ್ಥಿಗಳನ್ನೇ ಗುಂಪುಗಳಾಗಿ ವಿಂಗಡಿಸಿದ್ದು, ಅಡುಗೆ ನಿರ್ವಹಣೆ, ಸ್ವಚ್ಛತೆ, ಉದ್ಯಾನದ ನಿರ್ವಹಣೆ ಹೀಗೆ ವೇಳಾಪಟ್ಟಿ ಅನುಸಾರ ಹೊಣೆಯನ್ನು ನೀಡಲಾಗುತ್ತದೆ.

ಬಡಮಕ್ಕಳಿಗೆ ಹೊಸ ಬದುಕು, ಭರವಸೆ ನೀಡುವ ನೀಡುವ ಕಾಯಕಕ್ಕೆ ನಿಮಗೆ ಪ್ರೇರೆಪಣೆ ಏನು ಎಂಬ ಪ್ರಶ್ನೆಗೇ  ಕ್ರಿಸ್ಟಿನಾ ಮೇಲೆ ಕೈ ತೋರಿಸುತ್ತಾರೆ. ಅವರು ಕುಳಿತುಕೊಳ್ಳುವ ಆಸನದ ಮೇಲೆ ಯೇಸುವಿನ ಚಿತ್ರದ ಪಕ್ಕದಲ್ಲೇ ಪಕ್ಷಿಯನ್ನು ಅಂಗೈನಲ್ಲಿ ಹಿಡಿದು ರಕ್ಷಿಸುವ ಚಿತ್ರವಿದೆ. ಬದುಕು ಕಟ್ಟಿಕೊಡುವುದು ಎಂದು ಅರ್ಥೈಸಿಕೊಳ್ಳಬಹುದು!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT