ಕೊಲ್ಲಂ: ‘ದಿನೇ ದಿನೇ ಆತಂಕವಾದಿಗಳ ಆರ್ಭಟ ಹೆಚ್ಚುತ್ತಿದ್ದು, ದೇಶಕ್ಕೆ ಬಡತನಕ್ಕಿಂತ ಆತಂಕವಾದವೇ ದೊಡ್ಡ ಶತ್ರು’ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
ಮಾತಾ ಅಮೃತಾನಂದಮಯಿ 60ನೇ ಹುಟ್ಟುಹಬ್ಬದ ಪ್ರಯುಕ್ತ ಇಲ್ಲಿನ ಅಮೃತಪುರಿ ಮಠದಲ್ಲಿ ನಡೆದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಪಾಕಿಸ್ತಾನದ ಪೆಶಾವರದಲ್ಲಿ ಪ್ರಾರ್ಥನೆ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಚರ್ಚ್ ಮೇಲೆ ಆಂತಕವಾದಿಗಳಿಂದ ದಾಳಿ ನಡೆದಿದೆ. ಉಗ್ರರ ಉಪಟಳದಿಂದ ಜಮ್ಮು ಕಾಶ್ಮೀರ ಹೊತ್ತಿ ಉರಿಯುತ್ತಿದೆ. ಆತಂಕವಾದವನ್ನು ಸಂಪೂರ್ಣ ಹತ್ತಿಕ್ಕುವಂತಹ ರಾಜನೀತಿಯನ್ನು ಬೆಳೆಸುವ ಅಗತ್ಯವಿದೆ’ ಎಂದರು.
‘ಎಲ್ಲೆಡೆ ಅಶಾಂತಿ, ಹಿಂಸೆಯೇ ತಾಂಡವಾಡುತ್ತಿದೆ. ಆದರೆ, ‘ಅಮ್ಮ’ ನ ಮಠದಲ್ಲಿ ಶಾಂತಿ ನೆಲೆಸಿದೆ. ಮಾನವ ಸೇವೆಯೇ ಮಾಧವ ಸೇವೆ ಎಂಬ ತತ್ವದ ಮೇಲೆ ‘ಅಮ್ಮ’ ಜನರಿಗೆ ನೆರವಾಗುತ್ತಿದ್ದಾರೆ. ಭಾರತದ ಅಧ್ಯಾತ್ಮವೂ ಜಗತ್ತಿಗೆ ಹೊಸ ದಿಕ್ಕು ತೋರಿಸಬಲ್ಲ ಶಕ್ತಿಯನ್ನು ಪಡೆದಿದೆ. ಸರಳ ಭಾಷೆಯಲ್ಲಿ ಅಧ್ಯಾತ್ಮವನ್ನು ಪ್ರಚುರ ಪಡಿಸುತ್ತಿರುವುದು ನಿಜಕ್ಕೂ ದೊಡ್ಡ ಸಂಗತಿ’ ಎಂದು ಶ್ಲಾಘಿಸಿದರು.
ಸ್ವರ್ಗ ಬೇಡ : ನನಗೆ ಸ್ವರ್ಗ ಬೇಡ. ಮರು ಹುಟ್ಟು ಕೂಡ ಬೇಡ. ಜನರ ಕಣ್ಣೀರನ್ನು ಒರೆಸಬೇಕು. ಅವರ ಸಂಕಷ್ಟಗಳನ್ನು ಪರಿಹರಿಸುವ ಶಕ್ತಿಯನ್ನು ‘ಅಮ್ಮ’ ದಯಪಾಲಿಸಬೇಕು ಎಂದು ಮನವಿ ಮಾಡಿದ ಅವರು, ‘ಒಂದು ಸರ್ಕಾರ ಮಾಡಬೇಕಾದ ಕೆಲಸವನ್ನು ಅಧ್ಯಾತ್ಮ ಗುರುವಾಗಿ ಮಾಡುತ್ತಿರುವುದು ಸಂತಸ ತಂದಿದೆ. ಕೇರಳದ ಮಠದ ಭೇಟಿಯಿಂದಾಗಿ ನನ್ನಲ್ಲಿ ವಿಶೇಷ ಶಕ್ತಿ ಬಂದಿದೆ’ ಎಂದರು.
ಮಲಯಾಳದಲ್ಲಿ ಮೋದಿ:ಭಾಷಣದ ಆರಂಭದಲ್ಲಿಯೇ ಮೋದಿ ಮಲಯಾಳದಲ್ಲಿ ಮಾತನಾಡುವ ಮೂಲಕ ಜನರಲ್ಲಿ ಉತ್ಸಾಹ ತುಂಬಿದರು. ಅಮೃತಾನಂದಮಯಿ ಎಂಜಿನಿಯರಿಂಗ್ ಕಾಲೇಜು ವತಿಯಿಂದ ಅಶಕ್ತರ ಭದ್ರತೆಗಾಗಿ ತಯಾರಾದ ‘ಅಮೃತಮಿತ್ರ’ ಸಾಧನ ಬಿಡುಗಡೆ ಮಾಡಲಾಯಿತು.
ಕರ್ನಾಟಕದ ನಕ್ಸಲ್ ಪೀಡಿತ ಪ್ರದೇಶ ದತ್ತು!
ಮಾತಾ ಅಮೃತಾನಂದಮಯಿ 60ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅಮೃತಪುರಿ ಮಠಕ್ಕೆ ದೇಶ-ವಿದೇಶ ಸೇರಿದಂತೆ ನಾನಾ ಭಾಗಗಳಿಂದ ಭಕ್ತ ಸಾಗರವೇ ಹರಿದು ಬಂದಿತ್ತು. ಅಪ್ಪುಗೆ ಮೂಲಕವೇ ಜನರ ನೋವುಗಳಿಗೆ ಸ್ಪಂದಿಸುವ ‘ಅಮ್ಮ’ ಹುಟ್ಟುಹಬ್ಬದ ದಿನವೂ ಕೂಡ ಲಕ್ಷಾಂತರ ಅಭಿಮಾನಿಗಳನ್ನು ಅಪ್ಪುಗೆಯಿಂದಲೇ ಆದರಿಸಿದರು.
ಇದೇ ಸಂದರ್ಭದಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅಮೃತಾನಂದಮಯಿ, ‘ಶಿಕ್ಷಣ, ಆರೋಗ್ಯ ವ್ಯವಸ್ಥೆಯಲ್ಲಿ ಗಣನೀಯ ಪ್ರಗತಿ ಸಾಧಿಸಲು ಸದ್ಯದಲ್ಲಿಯೇ 101 ಗ್ರಾಮಗಳನ್ನು ದತ್ತು ಪಡೆದುಕೊಳ್ಳುವ ಬಗ್ಗೆ ಮಠ ಚಿತ್ತ ಹರಿಸಿದೆ’ ಎಂದು ತಿಳಿಸಿದರು.
‘ಎಲ್ಲ ರಾಜ್ಯದ ಹಿಂದುಳಿದ ಗ್ರಾಮಗಳಿಗೆ ಆದ್ಯತೆ ನೀಡಲಾಗುವುದು. ಶಿಕ್ಷಣ, ಆರೋಗ್ಯ, ವಸತಿ, ಕುಡಿಯುವ ನೀರು, ನೈರ್ಮಲ್ಯ ಇವುಗಳ ಬೆಳೆವಣಿಗೆಗೆ ಶ್ರಮಿಸಲಾಗುವುದು. ಗ್ರಾಮಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಯೋಜನೆಯ ಒಟ್ಟು ರೂಪು ರೇಷೆಯನ್ನು ಸಹ ಸಿದ್ಧಪಡಿಸಲಾಗುತ್ತಿದೆ' ಎಂದು ತಿಳಿಸಿದರು.
‘ಮೂರು ವರ್ಷಗಳ ಹಿಂದೆ ಪ್ರವಾಹ ಪೀಡಿತಕ್ಕೆ ಒಳಗಾಗಿದ್ದ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ವಸತಿ ನಿರ್ಮಾಣ ಯೋಜನೆಯೂ ಪೂರ್ಣಗೊಂಡಿದ್ದು ಫಲಾನುಭವಿಗಳಿಗೆ ವಸತಿಯನ್ನು ಹಂಚಲಾಗಿದೆ. ಇದಲ್ಲದೇ ಈ ಬಾರಿ ವಿಶೇಷ ಯೋಜನೆಯಲ್ಲಿ ಕರ್ನಾಟಕದ ನಕ್ಸಲ್ ಪೀಡಿತ ಪ್ರದೇಶಗಳನ್ನು ದತ್ತು ತೆಗೆದುಕೊಳ್ಳಲು ಚಿಂತನೆ ನಡೆಸಲಾಗಿದೆ' ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.