ಸುರತ್ಕಲ್: ಸಮಾಜದಲ್ಲಿ ಕೆಳಸ್ತರದ ಲ್ಲಿರುವ ಬಡಜನರ ಪರ ಚಿಂತನೆ ಹಾಗೂ ಕಾಳಜಿ ಸಂಘಟನೆಯಲ್ಲಿರಬೇಕು. ಸಮಾಜ ಮುಖಿ ಯೋಜನೆಗಳನ್ನು ರೂಪಿಸಬೇಕು ಎಂದು ಎಂಆರ್ಪಿಎಲ್ ಓಎನ್ಜಿಸಿಯ ಮೆಟೀರಿಯಲ್ ವಿಭಾಗದ ಉಪ ಮಹಾಪ್ರಬಂಧಕ ಕೆ.ಜಿ. ವಿಜಯಕುಮಾರ್ ಹೇಳಿದರು.
ಸುರತ್ಕಲ್ ಸಮೀಪದ ಬಾಳ ಸಮುದಾಯ ಭವನದಲ್ಲಿ ಭಾನುವಾರ ಎಂಆರ್ಪಿಎಲ್ ಓಎನ್ಜಿಸಿ ಕರ್ಮಚಾರ್ ಸಂಘ ಹಾಗೂ ಮಣಿಪಾಲ್ ದಂತ ವಿಜ್ಞಾನ ಸಂಸ್ಥೆಯ ಸಾರ್ವಜನಿಕ ಆರೋಗ್ಯ ಹಾಗೂ ದಂತಶಾಸ್ತ್ರ ವಿಭಾಗ ಸಹಯೋಗದಲ್ಲಿ ಆಯೋಜಿಸಲಾದ ಉಚಿತ ದಂತಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಎಂಆರ್ಪಿಎಲ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ರಘುರಾಮ ತಂತ್ರಿ, ಆರೋಗ್ಯದ ಬಗ್ಗೆ ಕಾಳಜಿ ಪ್ರತಿಯೊಬ್ಬ ಮನುಷ್ಯನ ಕರ್ತವ್ಯವಾಗಿದೆ. ಆರೋಗ್ಯವಂತ ಮನುಷ್ಯನಿಂದ ಮಾತ್ರ ಸಮಾಜಿಕ ಸೇವೆಯ ನಿರೀಕ್ಷೆ ಸಾಧ್ಯ ಎಂದರು.
ಮಂಗಳೂರು ಉತ್ತರ ವಲಯ ಬಿಜೆಪಿ ಅಧ್ಯಕ್ಷ ಶರತ್ಚಂದ್ರ ಶೆಟ್ಟಿ, ಪಾಲಿಕೆ ಸದಸ್ಯ ತಿಲಕ್ರಾಜ್, ಬಾಳ ಗ್ರಾ.ಪಂ. ಅಧ್ಯಕ್ಷ ಸಂದೇಶ್ ಶೆಟ್ಟಿ, ಎಂಆರ್ಪಿಎಲ್ ಮಾನವ ಸಂಪನ್ಮೂಲ ವಿಭಾಗದ ಪ್ರಬಂಧಕ ಸತೀಶ್, ಎಂಆರ್ಪಿಎಲ್ ಓಎನ್ಜಿಸಿ ಕರ್ಮಚಾರ್ ಸಂಘದ ಅಧ್ಯಕ್ಷ ಪ್ರವೀಣ್ಕುಮಾರ್,ಕಾರ್ಯದರ್ಶಿ ಪ್ರಸಾದ್ ಆಂಚನ್ ಕುತ್ತೆತ್ತೂರು, ವೈದ್ಯರಾದ ಡಾ.ಮಿಥುನ್ ಪೈ, ಡಾ. ರಮ್ಯ, ಡಾ. ವೈಭವ್ ಮತ್ತಿತರರು ಇದ್ದರು.
ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಮೂಡಾಯಿಕೋಡಿ ಕಾರ್ಯಕ್ರಮ ನಿರೂಪಿಸಿದರು.