ವೈಟ್ಫೀಲ್ಡ್: ದೇಶದ ಬಡಜನರ ಹಿತಕಾಪಾಡುವಲ್ಲಿ ಕೇಂದ್ರದ ಯುಪಿಎ ಸರ್ಕಾರ ಎಲ್ಲ ಹಂತದಲ್ಲೂ ವಿಫಲ ಆಗಿದೆ ಎಂದು ರಾಷ್ಟ್ರೀಯ ಬಿಜೆಪಿ ಉಪಾಧ್ಯಕ್ಷ ಸದಾನಂದಗೌಡ ಆರೋಪಿಸಿದರು.
ಮಹದೇವಪುರ ಬಿಜೆಪಿ ಘಟಕವು ಈಚೆಗೆ ಏರ್ಪಡಿಸಿದ್ದ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ದೇಶದಲ್ಲಿ ಶೇ.38 ರಷ್ಟು ಕುಟುಂಬಗಳು ಬಡತನ ರೇಖೆಗಿಂತ ಕೆಳಗಿವೆ. ವಾಜಪೇಯಿ ಪ್ರಧಾನಿ ಆಗಿದ್ದಾಗ ಕೇವಲ ಒಂದು ಬಾರಿ ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಿದಾಗ ಪ್ರತಿಭಟಿಸಿದ ಕಾಂಗ್ರೆಸ್ಸಿಗರು ಈಗ ಲೆಕ್ಕವಿಲ್ಲದಷ್ಟು ಬಾರಿ ಬೆಲೆಏರಿಕೆ ಮಾಡುತ್ತಿದ್ದಾರೆ. ಈ ಬಗ್ಗೆ ಅರಿವಿಲ್ಲವೇ?ಎಂದು ಪ್ರಶ್ನಿಸಿದರು.
ರಾಜಕೀಯ ಇಚ್ಚಾಶಕ್ತಿ: ಕಾಂಗ್ರೆಸ್ ಪಕ್ಷಕ್ಕೆ ಅಭಿವೃದ್ಧಿಯ ದೃಷ್ಟಿಕೋನವಿಲ್ಲ. ನೆಪ ಮಾತ್ರಕ್ಕೆ ಪ್ರಧಾನಿ ಆಗಿರುವ ಮನಮೋಹನ ಸಿಂಗ್ ಅವರು `ಮೌನ ಮೋಹನಸಿಂಗ್' ಆಗ್ದ್ದಿದಾರೆ ಎಂದು ಅವರು ಲೇವಡಿ ಮಾಡಿದರು.
ನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ಖಜಾಂಚಿ ಶೇಖರರೆಡ್ಡಿ ಇತರರು ಉಪಸ್ಥಿತರಿದ್ದರು.