ಮೈಸೂರು: ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯು ರೈತರಿಗೆ ನೀಡಬೇಕಾಗಿರುವ ಯಾವ ಬಾಕಿಯನ್ನೂ ಉಳಿಸಿಕೊಂಡಿಲ್ಲ. ಸರ್ಕಾರದ ಆದೇಶದ ಪ್ರಕಾರ ಆಯಾ ವರ್ಷಕ್ಕೆ ಎಲ್ಲವನ್ನೂ ಪಾವತಿಸಲಾಗಿದೆ ಎಂದು ಕಾರ್ಖಾನೆಯ ಆಡಳಿತ ಮಂಡಳಿ ಉಪಾಧ್ಯಕ್ಷ ವಿ. ವೆಂಕಟರೆಡ್ಡಿ ಸ್ಪಷ್ಟಪಡಿಸಿದರು.
ಮಂಗಳವಾರ ದಿ ಫೋರಂ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ರೈತರು ಮತ್ತು ಕಾರ್ಖಾನೆಯ ಆಡಳಿತ ಮಂಡಳಿಯ ನಡುವೆ ಭಿನ್ನಾಭಿಪ್ರಾಯ ಹುಟ್ಟಿಸಿ, ಕಾರ್ಖಾನೆಯನ್ನು ಮುಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಅದಕ್ಕಾಗಿ ಇಲ್ಲಸಲ್ಲದ ಅಪಪ್ರಚಾರ ಮತ್ತು ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಕಾರ್ಖಾನೆಗೆ ಕಬ್ಬು ನೀಡುವ ನಿಜವಾದ ರೈತರು ಈ ಬಗ್ಗೆ ಮಾತನಾಡುತ್ತಿಲ್ಲ. ಕೆಲವೇ ಕೆಲವು ಶಕ್ತಿಗಳು ಸಕ್ಕರೆ ಕಾರ್ಖಾನೆಯನ್ನು ಹಾಳು ಮಾಡುವ ಯತ್ನ ನಡೆಸಿದ್ದಾರೆ~ ಎಂದು ಹೇಳಿದರು.
`ಕಬ್ಬು ಸರಬರಾಜು ಮಾಡುವ ರೈತರಿಗೆ ನ್ಯಾಯಯುತ ಪಾಲು ನೀಡಲು ಸಿದ್ಧ. ಆ ನೀತಿಯನ್ನು ಸರ್ಕಾರವು ನಿರ್ಧರಿಸಬೇಕು. ಸಕ್ಕರೆ ಮತ್ತು ಇನ್ನಿತರ ಉತ್ಪನ್ನಗಳ ಆದಾಯಗಳ ಕುರಿತು ಪಾರದರ್ಶಕವಾದ ಲೆಕ್ಕಪತ್ರಗಳಿವೆ. ಯಾರು ಯಾವಾಗ ಬೇಕಾದರೂ ಬಂದು ಪರಿಶೀಲಿಸಲು ಮುಕ್ತವಾಗಿವೆ~ ಎಂದರು.
`ಕಬ್ಬು ರೈತರಿಗೆ ಆದಾಯದ ಪಾಲು ನೀಡಲು ಚಿಂತನೆ ನಡೆಸಲಾಗುತ್ತಿದೆ. ಅದರ ಪ್ರಮಾಣವನ್ನು ಸರ್ಕಾರವೇ ನಿರ್ಧರಿಸಬೇಕು~ ಎಂದು ಹೇಳಿದರು.
`ಉತ್ತರ ಕರ್ನಾಟಕದ ಕಬ್ಬು ರೈತರು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ನೀಡುತ್ತಿದ್ದಾರೆ. ಉತ್ತರ ಮತ್ತು ದಕ್ಷಿಣಕರ್ನಾಟಕದಲ್ಲಿ ಮೊದಲಿನಿಂದಲೂ ದರ ನಿಗದಿ ಬೇರೆ ಬೇರೆಯಾಗಿಯೇ ಇದೆ. ಅಲ್ಲಿ 2300 ರೂಪಾಯಿ ಕೊಡುತ್ತಿದ್ದಾರೆ. ನಾವು ಸರ್ಕಾರದ ಸೂಚನೆಯ ಮೇರೆಗೆ 1900 -2000 ರೂಪಾಯಿ ನೀಡುತ್ತಿದ್ದೇವೆ~ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಆದಿಶೇಷ, ಸಹಾಯಕ ಉಪಾಧ್ಯಕ್ಷ ಲಿಂಗೇಶ್ವರನ್, ಮುಖ್ಯ ಪ್ರಬಂಧಕ ವಿ. ಕೃಷ್ಣನ್, ಸರವಣನ್ ಹಾಜರಿದ್ದರು.