ಕಳೆದ 20 ವರ್ಷಗಳ ಹಿಂದೆ ಮನೋರೋಗಕ್ಕೆ ಸಂಬಂಧಿಸಿದಂತೆ ಇದ್ದ ಪರಿಸ್ಥಿತಿಯೇನೋ ಈಗ ಬದಲಾಗಿದೆ. ಮೊದಲು ಯರವಾಡಿ ಜೈಲಿನಂತಹ ಸ್ಥಳಗಳಲ್ಲಿ ಕಾಲಿಗೆ ಸರಪಳಿ ಹಾಕಿ ಮನೋರೋಗಿಗಳನ್ನು ಕೂಡಿ ಹಾಕುತ್ತಿದ್ದರು. ಒಳ್ಳೆಯ ಚಿಕಿತ್ಸೆ ಲಭ್ಯವಿರಲಿಲ್ಲ.
ಹೌದು, ಇಂತಹ ಭಯಾನಕ ಪರಿಸ್ಥಿತಿ ಈಗಿಲ್ಲ ನಿಜ. ರೋಗಿಗಳು ಯರವಾಡಿಯಂಥ ಜೈಲಿಗೆ ಹೋಗಬೇಕಾಗಿಲ್ಲ, ಮನೋರೋಗಕ್ಕೆ ಒಳ್ಳೆಯ ಚಿಕಿತ್ಸೆ ಸಹ ಲಭ್ಯವಿದೆ. ಆದರೆ ಮಾನಸಿಕ ರೋಗ ಮತ್ತು ರೋಗಿಗಳೆಡೆಗೆ ನಡೆಸುವ ನಮ್ಮ ತಾರತಮ್ಯ ಮನೋಭಾವ ಬದಲಾಗಿದೆಯೇ? ಖಂಡಿತಾ ಇಲ್ಲ. ನೆರೆಹೊರೆಯವರು, ಸಂಬಂಧಿಕರು, ಸ್ನೇಹಿತರು, ಮನೆಯವರು, ಸಮಾಜ, ಅಷ್ಟೇ ಏಕೆ ಮಾಧ್ಯಮಗಳಲ್ಲೂ ಕಾಣಿಸಿಕೊಳ್ಳುವ ಈ ತಾರತಮ್ಯದಲ್ಲಿ ಮಾತ್ರ ಯಾವುದೇ ಬದಲಾವಣೆ ಆಗಿಲ್ಲ. ನನ್ನಲ್ಲಿ ಬರುವ ಕೆಲವು ರೋಗಿಗಳು ತಮಗೆ ಅಂತಹ ರೋಗ ಇರುವ ಬಗ್ಗೆ ತಮ್ಮ ಸಂಬಂಧಿಕರಿಗೆ ಗುಟ್ಟು ಬಿಟ್ಟುಕೊಡದೆ, ವೇಷ ಮರೆಸಿಕೊಂಡು ಬರುವುದೂ ಉಂಟು.