ದಾವಣಗೆರೆ: ಸಾಮಾಜಿಕ ಪರಿವರ್ತನೆಗೆ ಅನುಗುಣವಾಗಿ ಕಾನೂನು ರೂಪಿತವಾಗಬೇಕು ಎಂದು ಆರ್.ಎಲ್. ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಬಿ.ಎಸ್. ರೆಡ್ಡಿ ಅವರು ಅಭಿಪ್ರಾಯಪಟ್ಟರು.ನಗರದ ವಕೀಲರ ಸಮುದಾಯ ಭವನದಲ್ಲಿ ಶನಿವಾರ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ, ಜಿಲ್ಲಾ ನ್ಯಾಯಾಂಗ ಮತ್ತು ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಕೀಲರಿಗಾಗಿ ಮಧ್ಯಸ್ಥಿಕೆ ಕಾರ್ಯಕ್ರಮ ಮತ್ತು ಮಧ್ಯಸ್ಥಿಕೆದಾರರಿಗೆ ಮಧ್ಯಸ್ಥಿಕೆ ವಿಷಯದ ಬಗ್ಗೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನಿನಿಂದಲೇ ಕಾನೂನು ತಿಳಿಯಲು ಸಾಧ್ಯವಿಲ್ಲ. ಅದಕ್ಕೆ ಪೂರಕವಾಗಿ ಸಮಾಜ, ಇತಿಹಾಸದ ಹಿನ್ನೆಲೆ ಇದ್ದಾಗ ಮಾತ್ರ ಅದರ ಪೂರ್ಣಪ್ರಮಾಣದ ಅರಿವು ಸಾಧ್ಯ ಎಂದು ಹೇಳಿದರು.ಪ್ರಾಚೀನ ಕಾಲದಿಂದಲೇ ಭಾರತದಲ್ಲಿ ಮಧ್ಯಸ್ಥಿಕೆ ಕಾನೂನು ಜಾರಿಯಲ್ಲಿತ್ತು. ಆದರೆ, ಬ್ರಿಟಿಷರಿಂದ ಬಳುವಳಿಯಾಗಿ ಬಂದ ನ್ಯಾಯ ಪದ್ಧತಿಯನ್ನು ನಾವು ಅನುಸರಿಸುತ್ತಿದ್ದೇವೆ. ಇದರಿಂದ ನ್ಯಾಯದಾನ ಪದ್ಧತಿಯಲ್ಲಿ ವಿಳಂಬವಾಗುತ್ತಿದೆ.
ಬ್ರಿಟಿಷ್ ಕಾನೂನು ಪದ್ಧತಿಯಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಜಯ ಸಿಗುತ್ತದೆ. ಆದರೆ, ಮಧ್ಯಸ್ಥಿಕೆ ಕಾನೂನಿಂದ ಇಬ್ಬರು ವ್ಯಕ್ತಿಗಳು ಜಯಗಳಿಸುತ್ತಾರೆ ಎಂದು ಅವರು ತಿಳಿಸಿದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿ. ತಿಮ್ಮೇಶ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಹಿರಿಯ ಮಧ್ಯಸ್ಥಿಕೆದಾರರಾದ ಶೋಭಾ ಪಾಟೀಲ, ಎಸ್.ಎನ್. ಸುಧಾ ಅವರು ಉಪಸ್ಥಿತರಿದ್ದರು.
ಪ್ರೇಮಾ ಮತ್ತು ತಂಡದವರು ಪ್ರಾರ್ಥಿಸಿದರು. ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ ಬಸವರಾಜ ಎಸ್. ತಡಹಾಳ್ ಅವರು ಕಾರ್ಯಕ್ರಮ ನಿರೂಪಿಸಿದರು.