ಹಿತ್ತಲಲ್ಲಿ ಬೆಳೆಯುವ ತರಕಾರಿ ಚೀಣೀ ಕಾಯಿ. ಇದು ಬಡ ಕುಟುಂಬವೊಂದಕ್ಕೆ ಆಸರೆಯಾಗಿ ನಿಲ್ಲಬಲ್ಲದು ಎಂಬುದನ್ನು ಯೋಚಿಸಿದರೆ ಅಚ್ಚರಿಯಾಗುತ್ತದೆ. ಮನೆ ಬಳಕೆಗೆಂದು ಹೊಲದ ಬದಿಯಲ್ಲಿ ಬೆಳೆದ ಚೀಣೀ ಕಾಯಿಯನ್ನು ಅಕ್ಕಪಕ್ಕದ ಮನೆಯವರು, ದಾರಿಹೋಕರು ಕೇಳಿ ಖರೀದಿಸಿದಾಗ, ಇದನ್ನೇ ಪೂರ್ಣಬೆಳೆಯಾಗಿ ಯಾಕೆ ಬೆಳೆಯಬಾರದು ಎಂದುಕೊಂಡರು ರೈತ ಮಂಜಪ್ಪ. ನಂತರದ್ದು ಅವರ ಯಶೋಗಾಥೆ.
ಮಂಜಪ್ಪನ ಊರು ತುಮಕೂರು ಜಿಲ್ಲೆ ಮಾರ್ಕೋನಹಳ್ಳಿ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಹೊಲದಲ್ಲಿ ಚೀಣೀ ಕಾಯಿ ಬೆಳೆಯುತ್ತಿದ್ದಾರೆ. ನೀರಿನ ಅಭಾವವಿರುವುದರಿಂದ ಹೊಲದಲ್ಲಿ ಬೇರಾವ ಬೆಳೆಯನ್ನು ಅಷ್ಟಾಗಿ ಬೆಳೆಯಲಾಗುವುದಿಲ್ಲ.
ಹೀಗಾಗಿ ಮಳೆಯ ನೀರನ್ನೆ ಆಧರಿಸಿದ್ದಾರೆ. ವರ್ಷಕ್ಕೆರಡು ಬಾರಿ ಗೊಬ್ಬರ ಹಾಕುತ್ತಾರೆ. ಮಳೆಗಾಲದಲ್ಲಿ ಕಾಯಿಗಳು ದಷ್ಟಪುಷ್ಟವಾಗಿರುತ್ತವೆ.
ವರ್ಷದಲ್ಲಿ ಮೂರು ಬೆಳೆ ಬೆಳೆಯಬಹುದು. ಕೂಲಿಯಾಳುಗಳನ್ನು ಹುಡುಕಬೇಕಿಲ್ಲ. ಅವರೇ ನೇರವಾಗಿ ಮಾರುಕಟ್ಟೆಗೆ ಹಾಕುತ್ತಾರೆ. ಸಾಮಾನ್ಯವಾಗಿ ಕಿಲೊಗೆ 18-20 ರೂಪಾಯಿ ದರ ಸಿಗುತ್ತದೆ. ಹಬ್ಬ ಹರಿದಿನಗಳಲ್ಲಿ ಅಕ್ಕ - ಪಕ್ಕದವರು ಮನೆ ಬಾಗಿಲಿಗೇ ಬಂದು ವ್ಯಾಪಾರ ಮಾಡುತ್ತಾರೆ. ಇದರಿಂದ ಇವರ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿದೆ.