ಹುಲಸೂರು: ನಿಸರ್ಗವು ಪರಿವರ್ತನಾಶೀಲವಾಗಿದ್ದು ಜೀವ ಸಂರಕ್ಷಣೆ ಮಾಡುತ್ತದೆ. ನಿಸರ್ಗದಂತೆ ಹಳೆಯದನ್ನು ಬಿಟ್ಟು ಹೊಸದನ್ನು ಒಪ್ಪಿಕೊಳ್ಳಬೇಕು. ಹಳೆಯದನ್ನು ಬಿಡುವುದೆಂದರೆ ಮೂಢ ನಂಬಿಕೆ, ಕಂದಾಚಾರ, ಅಂಧಶ್ರದ್ಧೆಗಳನ್ನು, ಸಂಪ್ರಾದಾಯಗಳನ್ನು ತ್ಯಜಿಸುವುದು ಎಂದು ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಕಿವಿಮಾತು ಹೇಳಿದರು.ಇಲ್ಲಿನ ಗುರುಬಸವೇಶ್ವರ ಸಂಸ್ಥಾನದ ಪ್ರೌಢ ಶಾಲೆಯ ಆವರಣದಲ್ಲಿ ಲಿಂ. ಬಸವಕುಮಾರ ಶಿವಯೋಗಿಗಳ 35ನೇ ಸ್ಮರಣೋತ್ಸವ ನಿಮಿತ್ತ ಹಮ್ಮಿಕೊಳ್ಳಲಾದ ಶರಣ ಸಂಸ್ಕೃತಿ ಉತ್ಸವದ ಸಾನಿಧ್ಯ ವಹಿಸಿ ಮಾತನಾಡಿದರು.
ಬಸವಧರ್ಮ ಬದ್ಧತೆಯ ತಳಹದಿಯ ಮೇಲೆ ರೂಪುಗೊಂಡಿದೆ. ಪ್ರಭುದ್ಧತೆಯ ಬುದ್ಧಿಯಿಂದ ಬದ್ಧತೆಯ ಜೀವನ ರೂಪಿಸಿಕೊಳ್ಳಬೇಕಾಗಿದೆ. ಇಂದು ನಾವು ಸಂಪ್ರದಾಯದ ಸುಳಿಯಲ್ಲಿ ಸಿಲುಕಿದ್ದೇವೆ, ಪ್ರಗತಿಪರ ಚಿಂತನೆಯ ಮೂಲಕ ಪ್ರಚಲಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ವಿಶ್ಲೇಷಿಸಿದರು.ಇಂದಿನ ಸಮಸ್ಯೆಗಳ ಪರಿಹಾರಕ್ಕೆ ದೇಸೀ ಸಂಸ್ಕೃತಿಯನ್ನು ಉಳಿಸಿಕೊಳ್ಳವುದು ಅವಶ್ಯವಾಗಿದೆ. ವಚನ ಸಾಹಿತ್ಯ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲದು ಎಂದು ಹುಮನಾಬಾದ್ನ ಡಾ. ಸೋಮನಾಥ ಯಾಳವಾರ ಅಭಿಪ್ರಾಯಪಟ್ಟರು.
ಭರತನೂರಿನ ಚಿಕ್ಕಗುರು ನಂಜೇಶ ಸ್ವಾಮಿಗಳು, ಶಿವಶರಣರ ವಚನಗಳಿಗೆ ಮರು ಹೋದರೆ ಮಾತ್ರ ಸಮಸ್ಯೆಗಳು ಪರಿಹಾರವಾಗಲು ಸಾಧ್ಯ ಎಂದರು. ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಬಸವಧರ್ಮದಲ್ಲಿ ಉತ್ತರ ಇದೆ ಎಂದು ಬಸವಗಿರಿಯ ಅಕ್ಕ ಅನ್ನಪೂರ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಚಿತ್ರದುರ್ಗದ ಮಾದಾರ ಚೆನ್ನಯ್ಯಾ ಸ್ವಾಮೀಜಿ,ಮಾತೆ ಮೈತ್ರಾದೇವಿ, ಸಾಯಿಗಾವ ಶಿವಾನಂದ ದೇವರು, ಕೊಡಂಗಲ ಶಿವಯೋಗೀಶ್ವರ ಸ್ವಾಮೀಜಿ, ವೈಜಿನಾಥ ಕಾಮಶೆಟ್ಟಿ, ಜಯದ್ರತ ಮಾಡ್ಜೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಗಣ್ಯರಿಗೆ ಪೀಠಾಧಿಪತಿ ಶಿವಾನಂದ ಸ್ವಾಮಿಗಳು ಸತ್ಕರಿಸಿದರು. ಉಪನ್ಯಾಸಕಿ ಮಲ್ಲಮ್ಮ ಪಾಟೀಲ್ ನಿರೂಪಿಸಿದರೆ, ಪ್ರೊ. ಭೀಮಾಶಂಕರ ಬಿರಾದಾರ ಶರಣು ಸಮರ್ಪಣೆ ಮಾಡಿದರು.