ನೆಲಮಂಗಲ: ಸ್ಥಳೀಯ ಉತ್ತರ ಕರ್ನಾಟಕ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಪಟ್ಟಣದ ಕವಾಡಿ ಮಠದಲ್ಲಿ `ಬನ್ನಿ-ಬಂಗಾರ-2011~ ಕಾರ್ಯಕ್ರಮವನ್ನು ಸಾಂಸ್ಕೃತಿಕ ವೈಭವದಿಂದ ಆಚರಿಸಲಾಯಿತು.
`ಉತ್ತರ ಕರ್ನಾಟಕದ ಸಂಸ್ಕೃತಿ ವಿಶಿಷ್ಠವಾದದ್ದು ಮತ್ತು ವಿಶೇಷತೆಯಿಂದ ಕೂಡಿದೆ. ನಗರೀಕರಣದ ಪ್ರಭಾವದಿಂದ ಆ ಸಂಸ್ಕೃತಿ ಕಳೆದು ಹೋಗುವ ಅಪಾಯವಿದೆ. ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ವೇದಿಕೆ ಪ್ರಯತ್ನ ನಡೆಸಲಿದೆ~ ಎಂದು ವೇದಿಕೆಯ ಗೌರವಾಧ್ಯಕ್ಷ ಡಾ.ರಾಘವೇಂದ್ರ ಜೋಷಿ ತಿಳಿಸಿದರು.
`ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಬಂದು ನೆಲಮಂಗಲದಲ್ಲಿ ನೆಲೆಸಿರುವ ಜನರಿಗೆ ಏಕಾಂಗಿತನ ಕಾಡದಿರಲಿ ಮತ್ತು ಅವರು ತಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಲಿ ಎನ್ನುವ ಸದುದ್ದೇಶ ಸಂಘದ್ದಾಗಿದೆ~ ಎಂದು ವೇದಿಕೆಯ ಕಾರ್ಯದರ್ಶಿ ಸಂಗಮೇಶ ಬಿರಾದರ ತಿಳಿಸಿದರು.
ವೇದಿಕೆಯ ಖಜಾಂಚಿ ಎಂ.ಸಿ.ಪಾಟೀಲ, ಕಲಾವಿದ ವಿಠ್ಠಲ ಬಾಂಬಲೇಕರ, ಕವಾಡಿ ಮಠದ ಕಾರ್ಯದರ್ಶಿ ಗಂಗಣ್ಣ, ಪುಟ್ಟಯ್ಯ ಮಾತನಾಡಿದರು. ಸುಜಾತಾ ಜೋಷಿ ಕಾರ್ಯಕ್ರಮದ ವಿಶೇಷತೆಯನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ಸಾಮೂಹಿಕವಾಗಿ ಶಮಿ ವೃಕ್ಷಕ್ಕೆ (ಬನ್ನಿ ಮರ) ವಿಶೇಷ ಪೂಜೆ ಸಲ್ಲಿಸಿ ಪರಸ್ಪರ ಬಂಗಾರ ವಿನಿಮಯ ಮಾಡಿಕೊಂಡು ಹಿರಿಯರಿಗೆ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಣವ ಜೋಷಿ ಪ್ರಾರ್ಥಿಸಿದರು. ಪರಿಮಳ ಸಂಗಮೇಶ್ ಸ್ವಾಗತಿಸಿದರು. ರಾಜಕುಮಾರ ಮಾಕಪುರ ನಿರೂಪಿಸಿದರು. ಶರಣಪ್ಪ ಗೌಡರ ವಂದಿಸಿದರು.