ಹುಣಸೂರು: ರಾಜ್ಯ ಹೆದ್ದಾರಿ 88ರ ಪಕ್ಕದಲ್ಲಿರುವ ಬನ್ನಿಕುಪ್ಪೆ ಗ್ರಾಮ ಕೊಳಚೆ ಪ್ರದೇಶದಂತಾಗಿರಲು ಕಾರಣ ಹಲವು.
ಮೂಲ ಸೌಲಭ್ಯಗಳ ಬಳಕೆ ಕುರಿತು ಜನರು ಕಾಳಜಿ ವಹಿಸದೇ ಇರುವುದು ದಿರುವುದು ಒಂದೆಡೆಯಾದರೆ, ನೈರ್ಮಲ್ಯ ನಿರ್ವಹಣೆಯ ನಿರ್ಲಕ್ಷ್ಯ ಇನ್ನೊಂದು ಕಾರಣ.
ಬನ್ನಿಕುಪ್ಪೆ ಜಿಲ್ಲಾ ಪಂಚಾಯಿತಿ ಕೇಂದ್ರ ಸ್ಥಾನ. ರಾಜ್ಯ ಹೆದ್ದಾರಿ 88ರಲ್ಲಿರುವ ಈ ಗ್ರಾಮದ ಭೂಮಿಯ ಬೆಲೆ ಈಗ ಗಗನ ಮುಟ್ಟಿದೆ. ಆದರೆ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವ ಬಗ್ಗೆ ಮಾತ್ರ ನಿರ್ಲಕ್ಷ್ಯ ಧೋರಣೆ ಇದೆ.
ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದೊಳಗೆ ವ್ಯವಸ್ಥಿತ ಚರಂಡಿ ನಿರ್ಮಿಸಲಾಗಿದೆ. ಆದರೆ ಚರಂಡಿ ನಿರ್ವಹಣೆ ಮಾತ್ರ ಇಲ್ಲವೇ ಇಲ್ಲ. ಚರಂಡಿಯೊಳಗೆ ಕಸ ತಂದು ಸುರಿಯಲಾಗಿದೆ. ಗ್ರಾಮ ಪಂಚಾಯಿತಿ ಇದರ ವಿಲೇವಾರಿಯ ಗೋಜಿಗೆ ಹೋಗಿಲ್ಲ. ಬಹಳಷ್ಟು ಭಾಗದಲ್ಲಿ ಚರಂಡಿಯೇ ಇಲ್ಲದೇ ಕೊಳಚೆ ನೀರು ಮನೆ ಮುಂದೆಯೇ ಸಂಗ್ರಹಗೊಂಡು ದುರ್ವಾಸನೆ ಮೂಗಿಗೆ ರಾಚುತ್ತಿದೆ.
ಗ್ರಾಮದ ಎಲ್ಲರ ಮನೆಗಳಲ್ಲಿನ್ನೂ ಶೌಚಾಲಯಗಳು ನಿರ್ಮಾಣಗೊಂಡಿಲ್ಲ. ಕೆಲವೇ ಕೆಲವು ಮನೆಗಳಲ್ಲಿ ಶೌಚಾಲಯವಿದೆ. ಶೌಚಾಲಯ ನಿರ್ಮಿಸಿಕೊಳ್ಳಲು ಸರ್ಕಾರ ಸಹಾಯಧನ ನೀಡುವುದಾಗಿ ಘೋಷಣೆ ಮಾಡಿದ್ದರೂ, ಈವರೆಗೂ ಸಹಾಯಧನ ಬಂದಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.
ಎಚ್.ಎಸ್.ಸಚ್ಚಿತ್