ಮಂಟಪದ ಮುಂದಿನ ಗುಂಡಿಗಳಿಗೆ ಮಣ್ಣು ತುಂಬಿಸಿ ತಗ್ಗು ಮುಚ್ಚಿಸಿದ್ದಾರೆ. ದಸರಾ ಉತ್ಸವಕ್ಕೆ ಸಾಕ್ಷಿ ಆಗಲಿರುವ ಈ ಮಂಟಪದ ಮುಂದೆ ಬಾಬುರಾಯನಕೊಪ್ಪಲಿನ ಬಿ.ಎಂ.ಸುಬ್ರಹ್ಮಣ್ಯ ಕುಟುಂಬದವರು ಬನ್ನಿ (ಶಮೀ) ವೃಕ್ಷ ಬೆಳೆಸಿ ಪೋಷಿಸುತ್ತಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಥವಾ ತಾಲ್ಲೂಕು ಆಡಳಿತ ಆಸಕ್ತಿ ವಹಿಸಿ ಈ ಪಾರಂಪರಿಕ ಮಂಟಪವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಸಂದೇಶ್, ಸುಬ್ರಹ್ಮಣ್ಯ ಇತರರು ಒತ್ತಾಯಿಸಿದ್ದಾರೆ.
ಪಟ್ಟಣ ಪುರಸಭೆ ಗುರುವಾರ ಈ ಮಂಟಪದ ಆಸುಪಾಸಿನಲ್ಲಿ ಬೆಳೆದಿದ್ದ ಗಿಡ, ಗಂಟಿಗಳನ್ನು ಕಿತ್ತು ಹಸನು ಮಾಡಿದೆ. ಮುಖ್ಯಾಧಿಕಾರಿ ರಾಜಣ್ಣ ಅವರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಜಂಬೂ ಸವಾರಿ ಆರಂಭವಾಗುವ ಸಮಯದಲ್ಲಿ ಸುಮಾರು ಒಂದೂವರೆ ಸಾವಿರ ಜನರು ಮಂಟಪದ ಬಳಿ ನೆರೆಯುವ ನಿರೀಕ್ಷೆ ಇದೆ. ಜಿಲ್ಲೆಯ ಜನರಿಗೆ ದಸರಾ ಉತ್ಸವದ ಆಹ್ವಾನ ನೀಡಲಾಗುತ್ತಿದೆ. ದಸರಾ ಬನ್ನಿ ಮಂಟಪದಿಂದ ಅ.20ರಂದು ಮಧ್ಯಾಹ್ನ 3 ಗಂಟೆಗೆ ಜಂಬೂ ಸವಾರಿ ಆರಂಭವಾಗಲಿದ್ದು, ಹೆಚ್ಚು ಜನರು ಪಾಲ್ಗೊಳ್ಳಬೇಕು ಎಂದು ತಹಶೀಲ್ದಾರ್ ಅರುಳ್ಕುಮಾರ್ ಕೋರಿದ್ದಾರೆ.