ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನದ ಸಸ್ಯಾಹಾರಿ ಪ್ರಾಣಿಧಾಮಕ್ಕೆ ಮೈಸೂರು ಮೃಗಾಲಯದಿಂದ ಮೂರು ಕಾಡೆಮ್ಮೆಗಳನ್ನು ಕರೆತರಲಾಗಿದೆ. ಇದರಿಂದಾಗಿ ಇಲ್ಲಿನ ಕಾಡೆಮ್ಮೆಗಳ ಕುಟುಂಬದ ಸಂಖ್ಯೆ ಎಂಟಕ್ಕೇರಿದೆ.
ಸದ್ಯ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಐದು ಕಾಡು ಕೋಣಗಳಿದ್ದು, ಸಂಗಾತಿ ಇಲ್ಲದೇ ಒಂಟಿಯಾಗಿದ್ದವು. ಕಾಡೆಮ್ಮೆ ಸಂತತಿ ಅಭಿವೃದ್ಧಿಗೆ ಇದರಿಂದ ಅಡಚಣೆಯಾಗಿತ್ತು.
ಬನ್ನೇರುಘಟ್ಟ ಜೈವಿಕ ಉದ್ಯಾನದ ಮನವಿ ಹಾಗೂ ಕೇಂದ್ರ ಮೃಗಾಲಯ ಪ್ರಾಧಿಕಾರದ ಒಪ್ಪಿಗೆ ಮೇರೆಗೆ ಮೈಸೂರು ಮೃಗಾಲಯದಿಂದ ಈ ಮೂರು ಕಾಡೆಮ್ಮೆಗಳನ್ನು ಬನ್ನೇರುಘಟ್ಟ ಉದ್ಯಾನಕ್ಕೆ ತರಲಾಗಿದೆ.
ನೂತನ ಅತಿಥಿಗಳನ್ನು ಉದ್ಯಾನದ ಪ್ರತ್ಯೇಕ ಆವರಣದಲ್ಲಿಡಲಾಗಿದೆ. ಒಂದು ವಾರ ಕಾಲ ನಿಗಾ ವಹಿಸಿದ ನಂತರ ಪ್ರವಾಸಿಗರ ವೀಕ್ಷಣೆಗೆ ಬಿಡಲಾಗುವುದು ಎಂದು ಉದ್ಯಾನದ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಆರ್.ರಾಜು ತಿಳಿಸಿದ್ದಾರೆ.