ವಿಜಾಪುರ: ತಾಲ್ಲೂಕಿನ ಹೊಳೆ ಬಬಲಾದದಲ್ಲಿ ಬುಧವಾರದಂದು ನಡೆದ ಚಂದ್ರಗಿರಿದೇವಿ ಮಠದ ಜಾತ್ರೆ ನಿಮಿತ್ತ ನಡೆದ ಜಾನುವಾರುಗಳ ಜಾತ್ರೆಗೆ ರೈತರು ತಮ್ಮ ದನ-ಕರುಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಗಮನ ಸೆಳೆದವು.
ಈ ಜಾತ್ರೆಗೆ ಪ್ರತಿ ವರ್ಷದಂತೆ ಈ ವರ್ಷವೂ ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಎರಡಲ್ಲಿ, ನಾಲ್ಕಲ್ಲಿ ಹೋರಿ ಕರುಗಳು, ಕಟ್ಟುಮಸ್ತಾಗಿ ಬೆಳೆಸಿದ ಸಾವಿರಾರು ಎತ್ತುಗಳು ಎತ್ತುಗಳು ಸುಮಾರು 100 ಎಕರೆಗಿಂತ ಹೆಚ್ಚು ಜಾಗದಲ್ಲಿ ಸೇರಿದ್ದರಿಂದ ದನಗಳ ಜಾತ್ರೆ ಗಿಜಿಗಿಡುತಿತ್ತು.
ಬರಗಾಲವಿದ್ದರೂ ರೈತರೂ ತಮ್ಮ ದೇವರು ಎಂದು ನಂಬಿರುವ ದನ-ಕರುಗಳು ಎತ್ತುಗಳನ್ನು ಚೆನ್ನಾಗಿ ಮೇಯಿಸಿ ಜಾತ್ರೆಗೆ ತಂದಿದ್ದರು. ಜಾತ್ರೆಯಲ್ಲಿ ಎತ್ತುಗಳನ್ನು ಕೊಳ್ಳುವವರು ಹಾಗೂ ಮಾರುವವರ ಸಂಖ್ಯೆ ಅಧಿಕವಾಗಿದ್ದು ಜಾತ್ರೆಗೆ ಮೆರುಗು ನೀಡಿತ್ತು.