ಕೆಜಿಎಫ್: ಚಿನ್ನದ ಗಣಿ (ಬಿಜಿಎಂಎಲ್) ಕಳವು ಯತ್ನ ಪ್ರಕರಣದ ಬೆನ್ನು ಬಿದ್ದಿರುವ ತನಿಖಾಧಿಕಾರಿಯೊಬ್ಬರಿಗೆ ಪ್ರೇಮ ಪ್ರಕರಣವೊಂದು ಪತ್ತೆಯಾಗಿದೆ.
ಕಳವು ಯತ್ನದಲ್ಲಿ ಗಣಿ ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿದೆ. ಮೊಬೈಲ್ ಕರೆಯ ‘ಇತಿಹಾಸ’ (ಕಾಲ್ ಡೀಟೇಲ್ಸ್) ಹೀಗೊಂದು ಕುತೂಹಲಕರ ವಿಷಯವನ್ನು ಬಹಿರಂಗಪಡಿಸಿದೆ.
ಮಾರಿಕುಪ್ಪಂ ಪೊಲೀಸ್ ಠಾಣೆ ವ್ಯಾಪ್ತಿಯ ಮೈಸೂರು ಮೈನ್ಸ್ ಮಿಲ್ನಲ್ಲಿ ನಡೆದ ಕಳ್ಳತನದ ಹಿನ್ನೆಲೆಯಲ್ಲಿ ಶೋಧ ನಡೆಸುತ್ತಿರುವ ಪೊಲೀಸರು, ಈ ಹಿಂದೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಬ್ ಇನ್ ಸ್ಪೆಕ್ಟರ್ ಒಬ್ಬರ ಅಧಿಕೃತ ಮೊಬೈಲ್ ಕಾಲ್ ಡೀಟೇಲ್ ತೆಗೆದುಕೊಂಡಾಗ ಅಪರ ವಯಸ್ಕರ ‘ಪ್ರೇಮ ಪ್ರಕರಣ’ ಬೆಳಕಿಗೆ ಬಂದಿತು ಎಂದು ಮೂಲಗಳು ತಿಳಿಸಿವೆ.
ಖಾಸಗಿ ನಂಬರ್ವೊಂದಕ್ಕೆ ಈ ಸಬ್ ಇನ್ ಸ್ಪೆಕ್ಟರ್ ದೀರ್ಘಕಾಲ ಮಾತನಾಡಿರುವುದು ಪತ್ತೆಯಾಗಿದೆ. ಸಾಮಾನ್ಯವಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿದಾರರು, ಸಿಬ್ಬಂದಿ, ಮೇಲಧಿಕಾರಿಗಳು ಇಲ್ಲವೇ ಕುಟುಂಬದ ಸದಸ್ಯರ ಜೊತೆ ದೀರ್ಘ ಕಾಲ ಮಾತನಾಡುವ ಸಂಭವವಿದೆ.
ಆದರೆ ಈ ಯಾವ ಗುಂಪಿಗೂ ಸೇರದ ವ್ಯಕ್ತಿಯೊಬ್ಬರ ಜೊತೆ ಮಧ್ಯರಾತ್ರಿ, ಬೆಳಗಿನ ಜಾವ ಹಾಗೂ ಹೊತ್ತಲ್ಲದ ಹೊತ್ತಿನಲ್ಲೂ ಮೊಬೈಲ್ ಸಲ್ಲಾಪದಲ್ಲಿ ತೊಡಗಿದ್ದರು ಎಂದು ತನಿಖೆ ನಡೆಸುತ್ತಿರುವ ಪೊಲೀಸರು ಶಂಕಿಸಿದ್ದಾರೆ.
ಈ ಅಧಿಕಾರಿಯನ್ನು ಒಮ್ಮೆ ಹೊರ ಜಿಲ್ಲೆಗೆ ವಿಶೇಷ ನಿಯೋಜನೆ ಮಾಡಿದಾಗ ಕೂಡ ಅಲ್ಲಿಂದಲೇ ಪ್ರೇಮಿಗೆ ನಿರಂತರ ಕರೆ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.
ಕಾಲ್ ಡೀಟೇಲ್ನಲ್ಲಿ ಹೆಚ್ಚು ಬಾರಿ ನಮೂದಾಗಿದ್ದ ಮೊಬೈಲ್ ನಂಬರ್ ಬೆನ್ನತ್ತಿ ಹೋದ ಪೊಲೀಸರಿಗೆ ನಿರೀಕ್ಷೆಯಂತೆಯೇ ಅದರ ಒಡೆತನ ಮಹಿಳೆಯದು ಎಂದು ಪತ್ತೆಯಾಗಿದೆ.
ಆಕೆಯಿಂದ ಅಧಿಕಾರಿಗೆ ಬರುತ್ತಿದ್ದ ಇನ್ಕಮಿಂಗ್ ಕರೆ ಕೇವಲ ಕೆಲವೇ ಕ್ಷಣಗಳದಾಗಿರುತ್ತಿತ್ತು. ಆ ನಂತರ ಅಧಿಕಾರಿ ಮೊಬೈಲ್ನಿಂದ ಮಾಡಿದ ಕರೆ ಮಾತ್ರ ದೀರ್ಘ ಅವಧಿಯದಾಗಿರುತ್ತಿದ್ದವು ಎಂದು ತಿಳಿದುಬಂದಿದೆ.
ಕರೆಯ ಬಗ್ಗೆ ಮಹಿಳೆಯನ್ನು ಪೊಲೀಸರು ಅನಧಿಕೃತವಾಗಿ ವಿಚಾರಣೆಗೆ ಒಳಪಡಿಸಿದಾಗ ಹಿಂದೆ ನಡೆದಿದ್ದ ಪ್ರೇಮ ಪ್ರಕರಣ ಸತ್ಯ ಎಂಬುದನ್ನು ಆಕೆ ಒಪ್ಪಿಕೊಂಡರು ಎಂದು ಮೂಲಗಳು ತಿಳಿಸಿವೆ.