ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲಾಯಿತು ಪ್ರೇಮ ಪ್ರಕರಣ!

ಗಣಿ ಕಳವು ಯತ್ನ: ಪೊಲೀಸ್‌ ಅಧಿಕಾರಿ ಮೊಬೈಲ್‌ನಿಂದ ಸತತ ಕರೆ
Last Updated 21 ಸೆಪ್ಟೆಂಬರ್ 2013, 8:58 IST
ಅಕ್ಷರ ಗಾತ್ರ

ಕೆಜಿಎಫ್‌: ಚಿನ್ನದ ಗಣಿ (ಬಿಜಿಎಂಎಲ್‌) ಕಳವು ಯತ್ನ ಪ್ರಕರಣದ ಬೆನ್ನು ಬಿದ್ದಿ­ರುವ ತನಿಖಾಧಿಕಾರಿಯೊಬ್ಬರಿಗೆ ಪ್ರೇಮ ಪ್ರಕರಣವೊಂದು ಪತ್ತೆಯಾಗಿದೆ.

ಕಳವು ಯತ್ನದಲ್ಲಿ ಗಣಿ ಅಧಿಕಾರಿ­ಗಳು, ಭದ್ರತಾ ಸಿಬ್ಬಂದಿ, ಪೊಲೀಸ್‌ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆ­ಸುತ್ತಿದೆ. ಮೊಬೈಲ್‌ ಕರೆಯ ‘ಇತಿಹಾಸ’ (ಕಾಲ್ ಡೀಟೇಲ್ಸ್) ಹೀಗೊಂದು ಕುತೂ­ಹಲಕರ ವಿಷಯವನ್ನು ಬಹಿರಂಗ­ಪಡಿ­ಸಿದೆ.

ಮಾರಿಕುಪ್ಪಂ ಪೊಲೀಸ್‌ ಠಾಣೆ ವ್ಯಾಪ್ತಿಯ ಮೈಸೂರು ಮೈನ್ಸ್ ಮಿಲ್‌­ನಲ್ಲಿ ನಡೆದ ಕಳ್ಳತನದ ಹಿನ್ನೆಲೆಯಲ್ಲಿ ಶೋಧ ನಡೆಸುತ್ತಿರುವ ಪೊಲೀಸರು, ಈ ಹಿಂದೆ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಬ್‌ ಇನ್ ಸ್ಪೆಕ್ಟರ್‌ ಒಬ್ಬರ ಅಧಿಕೃತ ಮೊಬೈಲ್‌ ಕಾಲ್ ಡೀಟೇಲ್ ತೆಗೆದುಕೊಂಡಾಗ ಅಪರ ವಯಸ್ಕರ ‘ಪ್ರೇಮ ಪ್ರಕರಣ’ ಬೆಳಕಿಗೆ ಬಂದಿತು ಎಂದು ಮೂಲಗಳು ತಿಳಿಸಿವೆ.

ಖಾಸಗಿ ನಂಬರ್‌ವೊಂದಕ್ಕೆ ಈ ಸಬ್‌ ಇನ್ ಸ್ಪೆಕ್ಟರ್‌ ದೀರ್ಘಕಾಲ ಮಾತ­ನಾಡಿರುವುದು ಪತ್ತೆಯಾಗಿದೆ. ಸಾಮಾ­ನ್ಯ­­ವಾಗಿ ಪೊಲೀಸ್‌ ಅಧಿಕಾರಿಗಳು ಮಾಹಿತಿದಾರರು, ಸಿಬ್ಬಂದಿ, ಮೇಲಧಿ­ಕಾರಿಗಳು ಇಲ್ಲವೇ ಕುಟುಂಬದ ಸದಸ್ಯರ ಜೊತೆ ದೀರ್ಘ ಕಾಲ ಮಾತನಾಡುವ ಸಂಭವವಿದೆ.

ಆದರೆ ಈ ಯಾವ ಗುಂಪಿಗೂ ಸೇರದ ವ್ಯಕ್ತಿಯೊಬ್ಬರ ಜೊತೆ ಮಧ್ಯರಾತ್ರಿ, ಬೆಳಗಿನ ಜಾವ ಹಾಗೂ ಹೊತ್ತಲ್ಲದ ಹೊತ್ತಿನಲ್ಲೂ ಮೊಬೈಲ್ ಸಲ್ಲಾಪದಲ್ಲಿ ತೊಡಗಿದ್ದರು ಎಂದು ತನಿಖೆ ನಡೆಸುತ್ತಿರುವ ಪೊಲೀಸರು ಶಂಕಿಸಿ­ದ್ದಾರೆ.

ಈ ಅಧಿಕಾರಿಯನ್ನು ಒಮ್ಮೆ ಹೊರ ಜಿಲ್ಲೆಗೆ ವಿಶೇಷ ನಿಯೋಜನೆ ಮಾಡಿದಾಗ ಕೂಡ ಅಲ್ಲಿಂದಲೇ ಪ್ರೇಮಿಗೆ ನಿರಂತರ ಕರೆ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.

ಕಾಲ್‌ ಡೀಟೇಲ್‌ನಲ್ಲಿ ಹೆಚ್ಚು ಬಾರಿ ನಮೂದಾಗಿದ್ದ ಮೊಬೈಲ್‌ ನಂಬರ್‌ ಬೆನ್ನತ್ತಿ ಹೋದ ಪೊಲೀಸರಿಗೆ ನಿರೀಕ್ಷೆ­ಯಂತೆಯೇ ಅದರ ಒಡೆತನ ಮಹಿಳೆ­ಯದು ಎಂದು ಪತ್ತೆಯಾಗಿದೆ.

ಆಕೆ­ಯಿಂದ ಅಧಿಕಾರಿಗೆ ಬರುತ್ತಿದ್ದ ಇನ್‌­ಕಮಿಂಗ್ ಕರೆ ಕೇವಲ ಕೆಲವೇ ಕ್ಷಣ­ಗಳದಾಗಿರುತ್ತಿತ್ತು. ಆ ನಂತರ ಅಧಿಕಾರಿ ಮೊಬೈಲ್‌ನಿಂದ ಮಾಡಿದ ಕರೆ ಮಾತ್ರ ದೀರ್ಘ ಅವಧಿಯದಾಗಿರುತ್ತಿದ್ದವು ಎಂದು ತಿಳಿದುಬಂದಿದೆ.

ಕರೆಯ ಬಗ್ಗೆ ಮಹಿಳೆಯನ್ನು ಪೊಲೀ­ಸರು ಅನಧಿಕೃತವಾಗಿ ವಿಚಾರಣೆಗೆ ಒಳಪಡಿಸಿದಾಗ ಹಿಂದೆ ನಡೆದಿದ್ದ ಪ್ರೇಮ ಪ್ರಕರಣ ಸತ್ಯ ಎಂಬುದನ್ನು ಆಕೆ ಒಪ್ಪಿ­ಕೊಂಡರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT