ಕಡೂರು: ತಾಲ್ಲೂಕಿನಾದ್ಯಂತ ಎಲ್ಲ ಹೋಬಳಿಗಳಲ್ಲಿ ಬಿತ್ತನೆ ಕುಂಟುತ್ತ ಸಾಗಿದ್ದು, ಪ್ರತಿದಿನ ಮೋಡ ಕವಿದ ವಾತಾವರಣ ವಿದೆ.
ಕಳೆದ ವರ್ಷ ಮೇ ಅಂತ್ಯಕ್ಕೆ ವಾಡಿಕೆ ಮಳೆ 84 ಮಿ.ಮೀ ಆಗಿದ್ದರೆ ಈ ಬಾರಿ ಇಲ್ಲಿಯವರೆಗೆ 44.4 ಮಿ.ಮೀ ಮಳೆಯಾಗಿದೆ.ಬೀರೂರು ಹೋಬಳಿಯಲ್ಲಿ ಸ್ವಲ್ಪ ಉತ್ತಮವಾಗಿ ಮಳೆಯಾದರೆ, ಸಿಂಗಟಗೆರೆ, ಸಖರಾಯಪಟ್ಟಣ, ಎಮ್ಮೆದೊಡ್ಡಿ,ಗಿರಿಯಾಪುರ ಹೋಬಳಿಗಳಲ್ಲಿ ಸಾಧಾರಣ ಮಳೆ ಬಿದ್ದಿರುವುದರಿಂದ ಬಿತ್ತನೆ ಮಾಡಿದ ರೈತ ತಲೆ ಮೇಲೆ ಕೈ ಹೊತ್ತು ಕುಳಿ ತಿದ್ದಾನೆ.
ಮುಂಗಾರು ಬೆಳೆಗಳಾದ ಎಳ್ಳು 3255 ಹೆಕ್ಟೇರ್,515 ಹೆಕ್ಟೇರ್ ಜೋಳ, 800 ಹೆಕ್ಟೇರ್ ಸೂರ್ಯಕಾಂತಿ, 195 ಹೆಕ್ಟೇರ್ ತೊಗರಿ, 145 ಹೆಕ್ಟೇರ್ ಅಲಸಂದಿ, 150 ಹೆಕ್ಟೇರ್ ಉದ್ದು, 800 ಹೆಕ್ಟೇರ್ ನೆಲಗಡಲೆ, 45 ಹೆಕ್ಟೇರ್ನಲ್ಲಿ ಹತ್ತಿ ಬಿತ್ತನೆ ಸಿಂಗಟಗೆರೆ, ಯಗಟಿ, ಪಂಚನಹಳ್ಳಿ, ಹಿರೇನಲ್ಲೂರು ಹೋಬಳಿಗಳಲ್ಲಿ ನಡೆದಿದೆ.
ಇನ್ನು ುವಾರದೊಳಗೆ ಮಳೆ ಬಾರದೆ ಇದ್ದರೆ ಹುಟ್ಟಿರುವ ಬೆಳೆಗಳೆಲ್ಲ ಒಣಗಿ ಹೋಗುವುದರಲ್ಲಿ ಸಂಶಯವಿಲ್ಲ ಎಂದು ಯಳಗೊಂಡನಹಳ್ಳಿ ರೈತ ರಾಮಪ್ಪ ತಮ್ಮ ನೋವನ್ನು ತೋಡಿಕೊಂಡರು.
ಬೀಜ, ಗೊಬ್ಬರಗಳಿಗೆ ಹಣವನ್ನು ಹೆಚ್ಚಿನ ಪ್ರಮಾಣದಲ್ಲಿ ಸುರಿದು ಬಿತ್ತನೆ ಮಾಡಿದ್ದು ನಮ್ಮ ಹಣೆಬರಹವೇ ಹೀಗೆ ಎಂದು ಗಂಗಮ್ಮ ಹತಾಶೆಯಿಂದ ದ್ವನಿಗೊಡಿಸಿದರು.
ಜೂ. 10 ಕ್ಕೆ ಮಳೆಯ ವಿವರ: ಕಡೂರು 26.6 ಮಿ.ಮೀ, ಬೀರೂರು 73.3, ಪಂಚನಹಳ್ಳಿ 50.1,ಯಗಟಿ 40.4, ಗಿರಿಯಾಪುರ 35.4, ಎಮ್ಮೆದೊಡ್ಡಿ 10, ಸಿಂಗಟಗೆರೆ 7.6 ಮಿ.ಮೀ ನಷ್ಟು ಕಡಿಮೆ ಮಳೆ ದಾಖಲಾಗಿದೆ.
ಮಳೆ: ಶಾಲಾ ಗೋಡೆ ಕುಸಿತ
ಮೂಡಿಗೆರೆ: ತಾಲ್ಲೂಕಿನಲ್ಲಿ ಮೃಗಶಿರ ಮಳೆ ರಭಸಕ್ಕೆ ಗೋಣಿಬೀಡು ಹೋಬಳಿಯ ಚಿನ್ನಿಗಾ ಶಾಲೆಯ ಕೊಠಡಿ ಗೋಡೆ ಕುಸಿದಿದೆ. ಸ್ಥಳಕ್ಕೆ ತಾಪಂ ಅಧ್ಯಕ್ಷ ರಂಜನ್ ಅಜಿತ್ ಕುಮಾರ್, ಜಿಪಂ ಸದಸ್ಯ ವಿ.ಕೆ.ಶಿವೇಗೌಡ, ಗ್ರಾಪಂ ಅಧ್ಯಕ್ಷ ಚೆನ್ನಕೇಶವ ಗುರುವಾರ ಭೇಟಿ ನೀಡಿ ಪರಿಶೀಲಿಸಿ ತಕ್ಷಣ ದುರಸ್ತಿಗೊಳಿಸುವ ಭರವಸೆ ನೀಡಿದರು.
ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ತಾ.ಪಂ ಅಧ್ಯಕ್ಷ ರಂಜನ್ ಅಜಿತ್ ಕುಮಾರ್, ತಾಲ್ಲೂಕಿನಲ್ಲಿ ಭಾರಿ ಮಳೆ ಬೀಳುತ್ತಿದ್ದು, ತುರ್ತುದುರಸ್ತಿ ಶಾಲೆಗಳ ಪಟ್ಟಿಯನ್ನು ತಕ್ಷಣ ಸಲ್ಲಿಸಿ, ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿ ಸಲು ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿನಲ್ಲಿನ ಮಳೆ ಹಾನಿ ಪ್ರಮಾಣ ವನ್ನು ತಕ್ಷಣ ಶಾಸಕರಿಗೆ, ಸಂಸದರಿಗೆ, ತಾಲ್ಲೂಕು ಆಡಳಿತಕ್ಕೆ ಸಲ್ಲಿಸುವಂತೆ ಎಲ್ಲ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಎಸ್ಡಿಎಂಸಿ ಅಧ್ಯಕ್ಷ ಅಬ್ಬಾಸ್, ಗ್ರಾ.ಪಂ ಸದಸ್ಯ ಸುದೀಪ್, ಪ್ರವೀಣ್, ಎಪಿಎಂಸಿ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಬಿಇಒ ಶರಶ್ಚಂದ್ರ, ರವಿಪ್ರಕಾಶ್, ಚಂದ್ರಮೌಳಿ, ತಾಪಂ ಮಾಜಿ ಸದಸ್ಯ ಪ್ರಭಾಕರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.