ಬಂಗಾರಪೇಟೆ: ತಾಲ್ಲೂಕನ್ನು ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಿಸಿದೆ. ಇದಕ್ಕಾಗಿ ಬಿಡುಗಡೆ ಆಗುವ ಅನುದಾನವನ್ನು ಸದ್ಬಳಕೆ ಆಗುವಂತೆ ಅಧಿಕಾರಿಗಳು ಸೂಕ್ತ ಕ್ರಮ ಅನುಸರಿಸಬೇಕು ಎಂದು ಶಾಸಕ ಎಂ.ನಾರಾಯಣಸ್ವಾಮಿ ಸೂಚಿಸಿದರು.
ಇಲ್ಲಿನ ದೊಡ್ಡವಲಗಮಾದಿ ಗ್ರಾಮ ದಲ್ಲಿ ಶುಕ್ರವಾರ ಎಸ್ಜಿಎಸ್ವೈ ಯೋಜನೆ ಅಡಿ ನಿರ್ಮಿಸಿದ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೀರಿನ ಸೌಕರ್ಯಕ್ಕಾಗಿ ರೂ. 4 ಕೋಟಿ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ತಾಲ್ಲೂಕು ಪಂಚಾಯಿತಿ ಸದಸ್ಯರ ಅನುದಾನದಲ್ಲಿ ಬಿಡುಗಡೆಯಾದ ರೂ.5 ಲಕ್ಷವನ್ನು ಕುಡಿಯುವ ನೀರಿಗೆ ವಿಶೇಷ ಪ್ರಾಶಸ್ತ್ಯ ನೀಡಿ ವಿನಿಯೋಗಿ ಸಬೇಕು ಎಂದು ಹೇಳಿದರು.
ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ನಾರಾಯಣಮ್ಮ ಶಿವಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯರು, ಡಿ.ಕೆ.ಹಳ್ಳಿ ಕ್ಷೇತ್ರ, ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸ್, ಚಂದ್ರಮ್ಮ ನಾಗರಾಜ್, ತಾ.ಪಂ. ಸದಸ್ಯ ಕೆ.ಎ.ಶಿವಣ್ಣ, ದೊಡ್ಡವಲಗಮಾದಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ. ಜಯರಾಮ್, ಉಪಾಧ್ಯಕ್ಷೆ ಸುಜಾತಮ್ಮ ರಮೇಶ್, ಪಿಡಿಒ ಎನ್. ವೆಂಕಟೇಶ್, ಕಾರ್ಯದರ್ಶಿ ಸಿ.ಕೃಷ್ಣಪ್ಪ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.