ಚನ್ನಗಿರಿ: ತಾಲ್ಲೂಕಿನಲ್ಲಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದು, ರೈತರು ಬಿತ್ತನೆ ಮಾಡದೇ ಪರದಾಡುತ್ತಿದ್ದಾರೆ. ಅದಕ್ಕಾಗಿ ಜುಲೈ 19ರಂದು ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ಈ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.
ತಾಲ್ಲೂಕಿನ ಕೊಂಡದಹಳ್ಳಿ ಗ್ರಾಮದಲ್ಲಿ ಎಸ್ಎಸ್ಪಿ ಹಾಗೂ ಟಿಎಸ್ಪಿ ಯೋಜನೆಯಡಿಯಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕೊಂಡದಹಳ್ಳಿ ಗ್ರಾಮದಲ್ಲಿ ಎಸ್ಎಸ್ಪಿ ಹಾಗೂ ಟಿಎಸ್ಪಿ ಯೋಜನೆಯಡಿಯಲ್ಲಿ ಕಾಂಕ್ರೀಟ್ ರಸ್ತೆಗೆ ರೂ 47 ಲಕ್ಷ, ಸಮುದಾಯ ಭವನಕ್ಕೆ ರೂ 5 ಲಕ್ಷ, ಗ್ರಾಮ ಪಂಚಾಯ್ತಿ ಕಟ್ಟಡ ನಿರ್ಮಾಣಕ್ಕೆ ರೂ 20 ಲಕ್ಷ ಕಾಳಮ್ಮ ದೇವಸ್ಥಾನಕ್ಕೆ ರೂ 3 ಲಕ್ಷ, ಓವರ್ ಹೆಡ್ ಟ್ಯಾಂಕ್ಗೆ
ರೂ 12 ಲಕ್ಷ, ಆರೋಗ್ಯ ಇಲಾಖೆ ಉಪಕೇಂದ್ರ ನಿರ್ಮಾಣಕ್ಕೆ ರೂ 22.50 ಲಕ್ಷ, ಸೂಳೆಕೆರೆಯಿಂದ ಚನ್ನಾಪುರ, ಕೊಂಡದಹಳ್ಳಿ, ಚಿಕ್ಕೂಡ, ಗೊಲ್ಲರಹಟ್ಟಿ, ನಿಂಬಾಪುರ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆಗೆ ರೂ 3 ಕೋಟಿ, ಚಿಕ್ಕೂಡ ಗೊಲ್ಲರಹಟ್ಟಿ ಗ್ರಾಮದ ಕಾಂಕ್ರಿಟ್ ರಸ್ತೆಗೆ ರೂ 40 ಲಕ್ಷ, ಟ್ಯಾಂಕ್ಗೆ ರೂ 12 ಲಕ್ಷ, ಚನ್ನಾಪುರ ಗ್ರಾಮಕ್ಕೆ ರೂ 40 ಲಕ್ಷ ಹಾಗೂ ನಿಂಬಾಪುರ ಗ್ರಾಮದಲ್ಲಿ ಟ್ಯಾಂಕ್ ನಿರ್ಮಾಣಕ್ಕೆ ರೂ 12 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದರು.
ಜಿಲ್ಲಾ ಮಾಜಿ ಉಪಾಧ್ಯಕ್ಷೆ ಪ್ರೇಮಾ ಸಿದ್ದೇಶ್, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಎಲ್.ಪಿ. ಚಿದಾನಂದಮೂರ್ತಿ, ಎನ್. ಪರಮೇಶ್ವರಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಂ. ಜಯ್ಯಪ್ಪ, ಸದಸ್ಯೆ ನೇತ್ರಮ್ಮ, ಬಸಯ್ಯ, ಪಂಚಾಯತ್ ರಾಜ್ ಇಲಾಖೆ ಎಇಇ ಸೋಮಶೇಖರಪ್ಪ ಮುಂತಾದವರು ಉಪಸ್ಥಿತರಿದ್ದರು.ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ತ್ರಿವೇಣಿ ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಸದಸ್ಯ ಕೆ.ಎಸ್. ಕುಮಾರ್ ಸ್ವಾಗತಿಸಿದರು.