ಬೆಂಗಳೂರು: ‘ಬರವಣಿಗೆಯಲ್ಲಿ ‘ಅದ್ಭುತ’ವನ್ನೇ ಹೇಳಬಹುದು. ಆದರೆ ಜೀವನದುದ್ದಕ್ಕೂ ಅದನ್ನು ಅನುಸರಿಸುವುದು ಬಹುಮುಖ್ಯ’ ಎಂದು ಸಾಹಿತಿ ಬಿ. ಎ ವಿವೇಕ ರೈ ಹೇಳಿದರು.
ನಗರದ ವಾಡಿಯಾ ಸಭಾಂಗಣದಲ್ಲಿ ಭಾನುವಾರ ಯಾಜಿ ಪ್ರಕಾಶನ ಏರ್ಪಡಿಸಿದ್ದ ಸಮಾರಂಭದಲ್ಲಿ ಪುರುಷೋತ್ತಮ ಬಿಳಿಮಲೆ ಅವರ ‘ಬಹುರೂಪ’, ವೀಣಾ ಬನ್ನಂಜೆ ಅವರ ‘ಅಂತರ್ಮುಖ’ ಹಾಗೂ ಮೋಹನ್ ಕುಂಟಾರ್ ಅವರ ‘ತೋಟಿಯ ಮಗ’ ಎಂಬ ಮೂರು ಪುಸ್ತಕಗಳನ್ನು ಅವರು ಲೋಕಾರ್ಪಣೆ ಮಾಡಿದರು.
‘ಗೋಚರವಾಗುವ ಅಂಶಗಳಿಗೇ ನಾವು ಹೆಚ್ಚು ಮಹತ್ವ ಕೊಡುತ್ತೇವೆ. ಆದರೆ, ನಮ್ಮ ಅಂತರಂಗಕ್ಕೆ ಅಪ್ರಾಮಾಣಿಕರಾಗಿರುತ್ತೇವೆ. ವೀಣಾ ಬನ್ನಂಜೆ ಅವರ ಬರಹಗಳಲ್ಲಿ ವ್ಯಕ್ತಿಯ ಅಗೋಚರವಾದ ಅಂತರಂಗಕ್ಕೆ ಪ್ರಾಮುಖ್ಯತೆ ಇದೆ’ ಎಂದು ಅವರು ಹೇಳಿದರು.
ಡಾ. ಮೋಹನ್ ಕುಂಟಾರ ಅವರು ಅನುವಾದಿಸಿದ ತೋಟಿಯ ಮಗ ಕಾದಂಬರಿ ಕುರಿತು ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಮಾತನಾಡಿ, ‘ಈ ಕೃತಿಯು ವ್ಯಕ್ತಿ, ಸಮುದಾಯದ ಚಲನೆಯ ಕಥೆಯಾಗಿದೆ. ಇದರಲ್ಲಿ ರಾಜಕೀಯ ಚಿಂತನೆಯ ಗಾಢ ಪ್ರಭಾವ ಕಾಣಬಹುದು’ ಎಂದರು.
ಡಾ. ವೀಣಾ ಬನ್ನಂಜೆ ಅವರ ‘ಅಂತರ್ಮುಖ’ ಕೃತಿಯ ಕುರಿತು ಮಾತನಾಡಿದ ವಿಮರ್ಶಕ ಡಾ. ಸಿ.ಎನ್ ರಾಮಚಂದ್ರನ್ ಅವರು, ‘ಇವು ಅನುಭಾವಿ ಮಾರ್ಗ ಹಾಗೂ ಆ ಮಾರ್ಗದಲ್ಲಿ ಸಾಗುತ್ತಿರುವವರ ಕುರಿತು ಮೂಡಿಬಂದ ಅನುಭಾವಿ ಬರಹಗಳಾಗಿವೆ’ ಎಂದು ಅಭಿಪ್ರಾಯಪಟ್ಟರು.
ಡಾ. ಎಸ್.ಆರ್. ವಿಜಯಶಂಕರ ಮಾತನಾಡಿ, ‘ಪುರುಷೋತ್ತಮ ಬಿಳಿಮಲೆ ಅವರ “ಬಹುರೂಪ” ಪುಸ್ತಕವು ಭಾರತದ ಬಹುರೂಪವನ್ನು ಕಟ್ಟಿಕೊಡುವುದರ ಜೊತೆಗೆ, ವಿಶ್ವದ ಹರವಿನಲ್ಲಿ ಬಹುರೂಪತೆ ಕಾಣುವ ಅತ್ಯುತ್ತಮ ಕೃತಿಯಾಗಿದೆ’ ಎಂದರು.
ಯಾಜಿ ಪ್ರಕಾಶನದ ಸವಿತಾ ಯಾಜಿ ಅತಿಥಿಗಳನ್ನು ಸ್ವಾಗತಿಸಿದರು. ಗಣೇಶ ಯಾಜಿ ವಂದಿಸಿದರು.