ಬೆಂಗಳೂರು: `ಸಾಹಿತ್ಯದ ಎಲ್ಲಾ ಪ್ರಕಾರಗಳಿಗಿಂತ ಭಿನ್ನವಾದದ್ದು ನಾಟಕ. ಇದೊಂದು ಜನಪ್ರಿಯ ಮಾಧ್ಯಮ ಎಂಬ ಎಚ್ಚರದಿಂದಲೇ ನಾಟಕ ಕಟ್ಟುವ ಪ್ರಕ್ರಿಯೆ ನಡೆಯಬೇಕು~ ಎಂದು ಹಿರಿಯ ರಂಗತಜ್ಞ ಮತ್ತು ನಿರ್ದೇಶಕ ಪ್ರಸನ್ನ ಹೇಳಿದರು.
ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಂಗತಜ್ಞ ಡಾ.ರಾಮಕೃಷ್ಣ ಮರಾಠೆ ಅವರಿಗೆ 2010 ನೇ ಸಾಲಿನ ಕಾವ್ಯಾನಂದ ಪುರಸ್ಕಾರ ಪ್ರದಾನ ಮಾಡಿ ಅವರು ಮಾತನಾಡಿದರು.
`ನಾಟಕ ಪ್ರಕಾರದ ಅರಿವು ರಾಮಕೃಷ್ಣ ಮರಾಠೆ ಅವರಲ್ಲಿ ಇರುವುದರಿಂದ ಅವರು `ರಾಮಧಾನ್ಯ~ ನಾಟಕವನ್ನು ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ಆದರೆ ಇನ್ನೂ ನಾಟಕದ ಬಂಧದಲ್ಲಿ ಗಟ್ಟಿತನ ಕಾಣಬೇಕು. ಬರೆಯುತ್ತಲೇ ಬೆಳೆಯುವ ಪ್ರಕ್ರಿಯೆಗೆ ತಮ್ಮನ್ನು ತಾವು ಒಡ್ಡಿಕೊಳ್ಳಬೇಕು. ಲಂಕೇಶರು ಕೂಡಾ ತಮ್ಮ ಏಕಾಂಕಗಳನ್ನು ತಮ್ಮ ನಾಟಕ ರಚನೆಯ ಪ್ರಯೋಗಗಳೆಂದೇ ತಿಳಿದವರು. ಅದರಿಂದಲೇ ಅವರ ಮುಂದಿನ ಶ್ರೇಷ್ಠ ನಾಟಕಗಳು ಮೂಡಿಬಂದವು~ ಎಂದು ಅವರು ನುಡಿದರು.
`ನಾಟಕ ಕಲೆ ಭಾರತದಲ್ಲಿ ಬಾಲ್ಯಾವಸ್ಥೆಯಲ್ಲಿರುವ ಮಾಧ್ಯಮ. ಆದರೂ ನಾಟಕದ ಶಕ್ತಿ ವಿಶಿಷ್ಠವಾದದ್ದು. ಅದಕ್ಕಾಗಿಯೇ ಕಾಳಿದಾಸ `ಕಾವ್ಯೇಷು ನಾಟಕಂ ರಮ್ಯಂ~ ಎಂದಿದ್ದು. ನಾಟಕದ ಈ ಶಕ್ತಿಯಿಂದಲೇ ಷೇಕ್ಸ್ಪಿಯರ್, ಮೋಲಿಯರ್ ಅವರಂಥಾ ಶ್ರೇಷ್ಠ ನಾಟಕಕಾರರು ನಾಟಕಗಳನ್ನು ಕಟ್ಟುತ್ತಲೇ ಬೆಳೆದರು~ ಎಂದರು.
`ರಾಮಧಾನ್ಯ~ ನಾಟಕದ ಬಗ್ಗೆ `ಸುಧಾ~ ವಾರಪತ್ರಿಕೆಯ ಸುದ್ದಿ ಸಂಪಾದಕ ಗುಡಿಹಳ್ಳಿ ನಾಗರಾಜ ಮಾತನಾಡಿದರು. ಟ್ರಸ್ಟ್ನ ಅಧ್ಯಕ್ಷೆ ವಿಜಯಾ ನಂದೀಶ್ವರ, ಟ್ರಸ್ಟಿ ಎಚ್. ಎಂ.ಕೃಷ್ಣಯ್ಯ, ಮ್ಯಾನೇಜಿಂಗ್ ಟ್ರಸ್ಟಿ ಪ್ರಸನ್ನ ಪುರಾಣಿಕ ಮತ್ತಿತರರು ಪಾಲ್ಗೊಂಡಿದ್ದರು.