ದೊಡ್ಡಬಳ್ಳಾಪುರ: ನಗರದ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿ ರಾಜ್ಯ ರೈತ ಶಕ್ತಿ ಸಂಘದ ಕಾರ್ಯಕರ್ತರು ಬ್ಯಾಂಕಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಶಕ್ತಿ ಸಂಘದ ಅಧ್ಯಕ್ಷ ಹೊನ್ನಾಘಟ್ಟ ಮಹೇಶ್, ಮುಖಂಡರಾದ ಸತೀಶ್, ಅಶೋಕ್, ಶ್ರಿನಿವಾಸ್ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ರೈತ ವಿರೋಧಿ ಕ್ರಮ ಅನುಸರಿಸುತ್ತಿದೆ.
ರೈತರ ಸ್ವತ್ತುಗಳನ್ನು ಹರಾಜು ಹಾಕುವ ಮೂಲಕ ಸಾಲ ವಸೂಲಿ ಮಾಡಲಾಗುತ್ತಿದೆ. ಇದರಿಂದ ರೈತರನ್ನು ಬೀದಿಗೆ ಬೀಳುವತಾಗಿದೆ. ಸಾಲ ವಸೂಲಾತಿ ನ್ಯಾಯವಾಗಿದ್ದರೂ ಬ್ಯಾಂಕ್ ಅನುಸರಿಸುತ್ತಿರುವ ಕ್ರಮ ಕಠೋರವಾಗಿದ್ದು, ರೈತರನ್ನು ಶೋಷಿಸಲಾಗುತ್ತಿದೆ. ಬ್ಯಾಂಕಿನ ಆಡಳಿತ ಮಂಡಳಿ ಮಾನವೀಯತೆ ಮರೆತಿದ್ದಾರೆ.ರೈತರಿಗೆ ಕಾಲಾವಕಾಶ ನೀಡಿ, ಸಾಲ ವಸೂಲಾತಿಯನ್ನು ಮಾನವೀಯತೆಯಿಂದ ಮಾಡಬೇಕಿದೆ ಎಂದು ಒತ್ತಾಯಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ವ್ಯವಸ್ಥಾಪಕ ಮರಿಬಸಪ್ಪ ಹರಾಜು ಹಾಕಲು ಕಾನೂನಿನಂತೆ ಕ್ರಮ ಕೈಗೊಳ್ಳಲಾಗಿದೆ. ಸ್ಥಿರ ಸ್ವತ್ತುಗಳ ಹರಾಜಿಗೆ, ಸಹಕಾರ ಸಂಘಗಳ ನಿಬಂಧಕರು ಆದೇಶಿಸಿದ್ದಾರೆ.ವ್ಯವಸ್ಥಾಪಕ ನಿರ್ದೇಶಕರು ಸಹ ಜಪ್ತಿಗೆ ಆದೇಶಿಸಿದ್ದು, ನ್ಯಾಯಾಲಯದ ಅನುಮತಿಯಿದೆ.
ಸಾರ್ವಜನಿಕ ಪ್ರಕಟಣೆ ಸಹ ಮಾಡಲಾಗಿದೆ.ಈ ವೇಳೆ ಹರಾಜು ಪ್ರಕ್ರಿಯೆಯನ್ನು ಅಡ್ಡಿಪಡಿಸುವ ಮೂಲಕ ಅಡಚಣೆ ಮಾಡಲಾಗುತ್ತಿದೆ.1995 ರಲ್ಲಿ ಸಾಲ ಪಡೆದ ಸುಸ್ತಿದಾರರೊಬ್ಬರು 8 ಲಕ್ಷ ರೂಪಾಯಿ ಸಾಲ ಪಾವತಿಸಬೇಕಾಗಿದ್ದು, ಒಂದೇ ಬಾರಿಯ ತಿರುವಳಿ ಪ್ರಕಾರ 4 ಲಕ್ಷ ರಿಯಾಯಿತಿ ಇದೆ.ರೈತರು ಬ್ಯಾಂಕಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಹಕರಿಸಬೇಕಿದೆ ಎಂದು ಮನವಿ ಮಾಡಿದರು.ಈ ಬಗ್ಗೆ ಸಂಬಂಧಪಟ್ಟವರಿಗೆ ವರದಿ ಸಲ್ಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.