ತುಮಕೂರು: ಪಡೆದ ಪದವಿ ಮುಂದಿನ ಜೀವನದ ಗಮ್ಯ ತಲುಪಲು ನೀಡಿರುವ ಪಾಸ್ ಪೋರ್ಟ್. ಕಾಣುವ ಕನಸೇ ನಿಮ್ಮನ್ನು ಗುರಿಯೆಡೆಗೆ ಉದ್ದೀಪಿಸುತ್ತದೆ. ಕನಸ್ಸು ಕಾಣಲು ಯಾರ ಅನುಮತಿ ಬೇಕಿಲ್ಲ ಎಂದು ಇನ್ಫೋಸಿಸ್ ಶಿಕ್ಷಣ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಶ್ರೀಕಂಠನ್ಮೂರ್ತಿ ಅಭಿಪ್ರಾಯಪಟ್ಟರು.ನಗರದ ಎಸ್ಐಟಿಯಲ್ಲಿ ಭಾನುವಾರ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಪತ್ರ ಹಾಗೂ ಪ್ರಶಸ್ತಿ, ಪದಕಗಳನ್ನು ವಿತರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸದಾ ಪರಿಷ್ಕರಿಸಿಕೊಳ್ಳುತ್ತಿರಬೇಕು. ಪೈಪೋಟಿ ಜೀವನದಲ್ಲಿ ಇದು ಅನಿವಾರ್ಯ. ಬಲಹೀನತೆಗಳನ್ನು ಅರ್ಥೈಸಿಕೊಂಡರೆ ಯಶಸ್ಸು ಸುಲಭ ಎಂದು ಹೇಳಿದರು.
ಎಂಬಿಎ ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದ ಎನ್.ಲೋಕೇಶ್, ಎಸ್.ಹರ್ಷಿತಾ, ಎಂಟೆಕ್ನ ಪಿ.ಎಸ್.ಶಿಲ್ಪಶ್ರೀ, ಕೆ.ಎನ್.ಕೃಷ್ಣಮೂರ್ತಿ, ಬಿ.ನಾಗರತ್ನ ಚಿತ್ತರಗಿ, ಮೈಕ್ರೋಫೈನಾನ್ಸ್ನ ಪಿಜಿ ಡಿಪ್ಲೊಮಾ ವಿಭಾಗದಲ್ಲಿ ಕೆ.ಪಿ.ಜ್ಯೋತಿ ಚಿನ್ನದ ಪದಕ ಪಡೆದರು.
ಡಾ.ಶಿವಕುಮಾರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಪದವಿ ಪುರಸ್ಕಾರಗಳು ವಿದ್ಯಾರ್ಥಿಗಳ ಸತತ ಪರಿಶ್ರಮ ಹಾಗೂ ಪೋಷಕರು ಸಂಸ್ಥೆಯ ಮೇಲೆ ಇಟ್ಟಿರುವ ನಂಬಿಕೆಯ ಪ್ರತೀಕವಾಗಿದೆ ಎಂದರು.ಎಸ್ಐಟಿ ಆಡಳಿತ ಮಂಡಳಿ ಅಧ್ಯಕ್ಷ ಡಾ.ಎನ್.ರುದ್ರಯ್ಯ, ಪ್ರಾಂಶುಪಾಲ ಡಾ.ಶಿವಕುಮಾರಯ್ಯ, ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ, ಡೀನ್ ಡಾ.ಶಶಿಶೇಖರ್, ಡಾ.ಎಂ.ಆರ್.ಸೊಲ್ಲಾಪುರ್ ಮತ್ತಿತರರು ಉಪಸ್ಥಿತರಿದ್ದರು.