ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ಜಿಲ್ಲೆ: 15 ನಾಮಪತ್ರಗಳು ತಿರಸ್ಕೃತ

Last Updated 19 ಏಪ್ರಿಲ್ 2013, 8:04 IST
ಅಕ್ಷರ ಗಾತ್ರ

ಬಳ್ಳಾರಿ: ಮೇ 5ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಜಿಲ್ಲೆಯ 9 ಕ್ಷೇತ್ರಗಳಲ್ಲಿ ಸಲ್ಲಿಸಲಾಗಿದ್ದ ಒಟ್ಟು 167 ನಾಮಪತ್ರಗಳಲ್ಲಿ,  15 ನಾಮಪತ್ರಗಳು ತಿರಸ್ಕೃತಗೊಂಡಿದ್ದು, 152 ನಾಮಪತ್ರಗಳು ಪುರಸ್ಕೃತವಾಗಿವೆ.

ಬಳ್ಳಾರಿ ನಗರ ಕ್ಷೇತ್ರದಲ್ಲಿ 12, ಸಿರುಗಪ್ಪದಲ್ಲಿ 1, ಕಂಪ್ಲಿಯಲ್ಲಿ 1, ಸಂಡೂರಲ್ಲಿ 1 ನಾಮಪತ್ರ ತಿರಸ್ಕೃತಗೊಂಡಿವೆ. ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಪಿ.ವಲಿಸಾಬ್, ಎಸ್.ಡಿ. ಗೋವಿಂದರಾಜುಲು, ಯು.ಉರಕುಂದ (ಸಲ್ಲಿಸಿದ್ದ ಎರಡೂ ನಾಮಪತ್ರ), ಕೆ. ಆನಂದ, ಮಹಮ್ಮದ್ ನಾಸಿರ್, ಎಸ್.ಝಕೀರ್ ಹುಸೇನ್, ಕೆ.ಉಮೇಶ,  ಪಿ.ಪಾರ್ಥಸಾರಥಿ, ಕೋನಂಕಿ ರಾಮಪ್ಪ, ಉದಯಕುಮಾರ್ ಹಾಗೂ ಪ್ರಸಾದ್ ಅವರ ನಾಮಪತ್ರಗಳು ತಿರಸ್ಕೃತವಾಗಿವೆ.

ಕೋನಂಕಿ ರಾಮಪ್ಪ ಅವರು ಕಾಂಗ್ರೆಸ್ ಪಕ್ಷದಿಂದ ಬಿ. ಫಾರಂ ಇಲ್ಲದೆ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿದ್ದು, ಅವರು ಪಕ್ಷೇತರರಾಗಿ ಸಲ್ಲಿಸಿರುವ ನಾಮಪತ್ರ ಸ್ವೀಕೃತವಾಗಿದೆ. ಕೆಜೆಪಿಯಿಂದ ಪಿ.ಪಾರ್ಥಸಾರಥಿ ಅವರು ಸಲ್ಲಿಸಿದ್ದ ನಾಮಪತ್ರವೂ ತಿರಸ್ಕೃತಗೊಂಡಿದೆ.

ಸಿರುಗುಪ್ಪದಲ್ಲಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಅವರ ಪತ್ನಿ ಶಾರದಮ್ಮ ಬಿಜೆಪಿಯಿಂದ ಸಲ್ಲಿಸಿದ್ದ ನಾಮಪತ್ರ ಬಿ.ಫಾರಂ ಇಲ್ಲದ್ದರಿಂದ ತಿರಸ್ಕೃತಗೊಂಡಿದೆ. ಸಂಡೂರಿನಲ್ಲಿ ಜೆಡಿಎಸ್‌ನಿಂದ ಆರ್.ರಘುನಾಥ್, ಕಂಪ್ಲಿಯಲ್ಲಿ ಕಾಂಗ್ರೆಸ್‌ನಿಂದ ಡಿ.ನಾರಾಯಣಪ್ಪ ಸಲ್ಲಿಸಿದ್ದ ನಾಮಪತ್ರಗಳೂ ತಿರಸ್ಕೃತಗೊಂಡಿವೆ.

ಬಳ್ಳಾರಿ ನಗರ ಕ್ಷೇತ್ರದಲ್ಲಿ ಸಲ್ಲಿಸಲಾಗಿದ್ದ 42ರಲ್ಲಿ 30, ಗ್ರಾಮೀಣ ಕ್ಷೇತ್ರದಲ್ಲಿ 15, ವಿಜಯನಗರ ಕ್ಷೇತ್ರದಲ್ಲಿ 23, ಸಿರುಗುಪ್ಪದಲ್ಲಿ ಸಲ್ಲಿಸಲಾಗಿದ್ದ 11ರಲ್ಲಿ 10, ಕಂಪ್ಲಿಯಲ್ಲಿ ಸಲ್ಲಿಸಲಾಗಿದ್ದ 11ರಲ್ಲಿ 10, ಹಗರಿ ಬೊಮ್ಮನಹಳ್ಳಿಯಲ್ಲಿ 24,  ಹೂವಿನ ಹಡಗಲಿಯಲ್ಲಿ 15, ಕೂಡ್ಲಿಗಿಯಲ್ಲಿ 15, ಸಂಡೂರಿನಲ್ಲಿ ಸಲ್ಲಿಸಲಾಗಿದ್ದ 11ರಲ್ಲಿ 10 ನಾಮಪತ್ರಗಳು ಸ್ವೀಕೃತಗೊಂಡಿವೆ ಎಂದು ಚುನಾವಣಾಧಿಕಾರಿ ಪ್ರಕಟಣೆ ತಿಳಿಸಿದೆ.

ಬಿಗಿಭದ್ರತೆ
ಹೊಸಪೇಟೆ: ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಹಂಪಿ ಹಾಗೂ ಹೊಸಪೇಟೆಯ ತುಂಗಭದ್ರಾ ಜಲಾಶಯಗಳಿಗೆ ಮತ್ತಷ್ಟು ಬಿಗಿಭದ್ರತೆ ನೀಡಲಾಗಿದ್ದು ಅಪರಿಚಿತ ವ್ಯಕ್ತಿಗಳ ಚಲನ ವಲನಗಳನ್ನು ನಿಗಾವಹಿಸಲಾಗುತ್ತಿದೆ ಎಂದು ಡಿವೈಎಸ್‌ಪಿ ರಶ್ಮಿ ಪರಡ್ಡಿ ತಿಳಿಸಿದ್ದಾರೆ.

ಹಂಪಿ ಹಾಗೂ ತುಂಗಭದ್ರಾ ಜಲಾಶಯಗಳಿಗೆ ರಕ್ಷಣೆ ನೀಡಲಾಗಿದ್ದು ಮತ್ತಷ್ಟು ಗಸ್ತು ಪಹರೆ ಹೆಚ್ಚಿಸುವುದು ಸೇರಿದಂತೆ ಪ್ರತಿ ವಾಹನ ಹಾಗೂ ವ್ಯಕ್ತಿಗಳ ಚಲನ ವಲನಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ, ಅನುಮಾನಾಸ್ಪದ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸುವ ಮೂಲಕ ಯಾವುದೇ ಅಹಿತಕರ ಘಟನೆಗಳಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT