ಬೆಂಗಳೂರು: `ಬಳ್ಳಾರಿ ಜಿಲ್ಲೆಯ ಚಿತ್ರಣ ಈಗ ಸಂಪೂರ್ಣ ಬದಲಾಗಿದ್ದು, ಕೆಂಪು ದೂಳು ತುಂಬಿಕೊಂಡಿದ್ದ ಪ್ರದೇಶದಲ್ಲಿ ಈಗ ಹಸಿರು ಕಾಣುತ್ತಿದೆ' ಎಂದು ಸಮಾಜ ಪರಿವರ್ತನ ಸಮುದಾಯದ ಸಲಹೆಗಾರ ಎಸ್.ಆರ್. ಹಿರೇಮಠ ಸಲಹೆ ನೀಡಿದರು.
ನಗರದ ರಾಮಮೂರ್ತಿನಗರದಲ್ಲಿ ಮಂಗಳವಾರ ಕೂಲಿ ಕಾರ್ಮಿಕರ ಹಿತ ರಕ್ಷಣಾ ಸಂಘದ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. `ನಮ್ಮ ಹೋರಾಟದಿಂದ ಯಾರಿಗೂ ಅನ್ಯಾಯವಾಗಿಲ್ಲ. ಲೂಟಿ ಮಾಡುವವರಿಗೆ ತಕ್ಕಪಾಠ ಕಲಿಸಿದ್ದು, ನಿಸರ್ಗದ ಮೇಲಿನ ಅತ್ಯಾಚಾರ ತಡೆಯಲಾಗಿದೆ' ಎಂದು ಹೇಳಿದರು. `ಕೂಲಿ ಕಾರ್ಮಿಕರಿಗೆ ಬೇಕಾದ ಸಹಕಾರ ನೀಡಲು ನಮ್ಮ ಸಂಸ್ಥೆ ಸಿದ್ಧವಿದೆ' ಎಂದು ಅವರು ಭರವಸೆ ನೀಡಿದರು.
ಸಾಮಾಜಿಕ ಕಾರ್ಯಕರ್ತ ಅಶ್ವತ್ಥ ನಾರಾಯಣಗೌಡ, ಜೆಡಿಎಸ್ ಮುಖಂಡ ರವಿಪ್ರಕಾಶ, ಸಂಘದ ಅಧ್ಯಕ್ಷ ಮಹೇಶ ರೆಡ್ಡಿ, ಸಮಾಜ ಪರಿವರ್ತನ ಸಮುದಾಯದ ಸದಸ್ಯೆ ನಾಗರತ್ನಮ್ಮ ಹಾಜರಿದ್ದರು.