ಬಳ್ಳಾರಿ: ಜಿಲ್ಲೆಯ ಬಳ್ಳಾರಿ ಮತ್ತು ಸಂಡೂರು ತಾಲ್ಲೂಕುಗಳಲ್ಲಿ ಸೋಮವಾರ ಮಧ್ಯಾಹ್ನ ಪ್ರತ್ಯೇಕ ಘಟನೆಗಳಲ್ಲಿ ಸಿಡಿಲು ಬಡಿದು ಒಟ್ಟು ಇಬ್ಬರು ಮೃತಪಟ್ಟು ಆರು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.
ಬಳ್ಳಾರಿ ತಾಲ್ಲೂಕಿನ ಕಪ್ಪಗಲ್ ಗ್ರಾಮದ ಹೊರವಲಯದ ಜಮೀನಿನಲ್ಲಿ ಬಸಪ್ಪ ವಾಲ್ಮೀಕಿ (30) ಎಂಬುವವರು ಸಿಡಿಲಿಗೆ ಬಲಿಯಾಗಿದ್ದಾರೆ. ಶಿವಪ್ಪ ಎಂಬುವವರು ತೀವ್ರ ಗಾಯಗೊಂಡಿದ್ದಾರೆ. ಇದೇ ವೇಳೆ ಗಾಯಗೊಂಡಿರುವ ಶೇಖಯ್ಯ ಮತ್ತು ಗೂಳೆಪ್ಪ, ಬಳ್ಳಾರಿ ಸಮೀಪದ ಮಸೀದಿಪುರ ಗ್ರಾಮದ ಸಾವಿತ್ರಮ್ಮ ಎಂಬುವವರನ್ನು ವಿಮ್ಸಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಸಂಡೂರು ತಾಲ್ಲೂಕಿನ ಯು. ರಾಜಾಪುರ ಗ್ರಾಮದ ಹೊರ ವಲಯದಲ್ಲಿ ರಾಜಾ ಎಂಬ (14) ಬಾಲಕ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಆತನ ಪಾಲಕರಾದ ಪಂಪಾಪತಿ, ಗಂಗಮ್ಮ ಎಂಬುವವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಮಳೆಯಿಂದ ರಕ್ಷಣೆಗಾಗಿ ಮರದ ಅಡಿಯಲ್ಲಿ ನಿಂತಿದ್ದಾಗ ಸಿಡಿಲು ಬಡಿದಿದೆ.