ಸಿರುಗುಪ್ಪ: ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿಯವರ ಬಂಧನ ವಿರೋಧಿಸಿ ಇಲ್ಲಿಯ ಬಿಜೆಪಿ ತಾಲ್ಲೂಕು ಘಟಕ ಮಂಗಳವಾರ ನಡೆಸಿದ ಪ್ರತಿಭಟನಾ ಮೆರವಣಿಗೆ ಮತ್ತು ರಸ್ತೆತಡೆ ಶಾಂತ ರೀತಿಯಲ್ಲಿ ಜರುಗಿತು.
ಪಟ್ಟಣದ ಕೆ.ಇ,ಬಿ ಕಚೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯಲ್ಲಿ ಕಪ್ಪುಪಟ್ಟಿ ಧರಿಸಿ ಭಾಗವಹಿಸಿದ ಮುಖಂಡರು ಕಾರ್ಯಕರ್ತರು ಕೇಂದ್ರ ಸರ್ಕಾರ ಧೋರಣೆಯನ್ನು ಖಂಡಿಸಿ ಘೋಷಣೆ ಕೂಗುತ್ತಾ ಮುಖ್ಯ ಬೀದಿಯಲ್ಲಿ ತೆರಳಿ ನಂತರ ಗಾಂಧಿವೃ ತ್ತದಲ್ಲಿ ಒಂದು ಗಂಟೆ ಕಾಲ ಶಾಸಕ ಎಂ.ಎಸ್. ಸೋಮಲಿಂಗಪ್ಪ ಅವರ ನೇತೃತ್ವದಲ್ಲಿ ರಸ್ತೆತಡೆ ನಡೆಸಿದರು.
ಜಿ.ಜನಾರ್ದನ ರೆಡ್ಡಿಯವರ ಸಿಬಿಐ ಬಂಧನ ಕಾಂಗ್ರೆಸ್ ಪಕ್ಷದ ಷಡ್ಯಂತ್ರ, ಕೇಂದ್ರ ಸರ್ಕಾರ ಸಿಬಿಐ ತನಿಖಾ ಸಂಸ್ಥೆಯನ್ನು ತನ್ನ ಕೈಗೊಂಬೆಯಾಗಿ ದುರುಪಯೋಗಪಡಿಸಿಕೊಂಡಿದೆ ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಆಡಳಿತವಿರುವ ಆಂಧ್ರ ಪ್ರದೇಶಕ್ಕೆ ಒಂದು ನೀತಿ, ನಮ್ಮ ರಾಜ್ಯಕ್ಕೆ ಮತ್ತೊಂದು ನೀತಿ ಅನುಸರಿಸಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ ಎಂದು ಟೀಕಿಸಿದರು. ರೆಡ್ಡಿ ಜೈಲಿಗೆ ಹೋದಾಕ್ಷಣ ಅಪರಾಧಿ ಆಗುವುದಿಲ್ಲ, ಅವರು ನಿರಪರಾಧಿಗಳಾಗಿ ಹೊರಬರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಪಿ.ಮಾರೆಪ್ಪ, ಜಿ.ಪಂ.ಸದಸ್ಯ ಡಿ.ಸೋಮಪ್ಪ ಮಾತನಾಡಿದರು.
ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಎಚ್.ಕೆ.ಸಿದ್ದಯ್ಯಸ್ವಾಮಿ, ತಾಲ್ಲೂಕು ಘಟಕದ ಅಧ್ಯಕ್ಷ ಸುಳುವಾಯಿ ಮಲ್ಲಿಕಾರ್ಜುನ, ಉಪಾಧ್ಯಕ್ಷ ಶಂಕರ ರೆಡ್ಡಿ, ಪುರಸಭೆ ಅಧ್ಯಕ್ಷ ಬಿ.ಈರಣ್ಣ, ಎಪಿಎಂಸಿ ಅಧ್ಯಕ್ಷ ಮಂಜುನಾಥ ಗೌಡ, ಜಿ.ಪಂ.ಸದಸ್ಯ ವಸಂತಗೌಡ, ಜಿ.ಪಂ. ಮಾಜಿ ಸದಸ್ಯ ರಾರಾವಿ ಹನುಮಂತಪ್ಪ, ತೆಕ್ಕಲಕೋಟೆ ಪ.ಪಂ.ಮಾಜಿ ಅಧ್ಯಕ್ಷ ಸಿದ್ದಪ್ಪ, ಕೃಷ್ಣ, ಯು.ಅಮರೇಶಪ್ಪ, ಫಜಲ್ಸಾಬ್, ಪುರಸಭೆ ಸದಸ್ಯರು, ತಾ.ಪಂ.ಸದಸ್ಯರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇಂದು ಪಟ್ಟಣದ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಆಗಿದ್ದರಿಂದ ಮಕ್ಕಳು ಶಾಲೆಗೆ ಬಂದು ಪುನಹ ಮನೆಗೆ ತೆರಳಿದರು. ಪಟ್ಟಣದಲ್ಲಿ ಎಂದಿನಂತೆ ವ್ಯವಹಾರ ವಹಿವಾಟು ನಡೆಯಿತು. ವಾಹನ ಸಂಚಾರಕ್ಕೆ ಯಾವುದೇ ಅಡ್ಡಿಯಾಗಿಲ್ಲ.
ಕಂಪ್ಲಿ ಬಂದ್
ಕಂಪ್ಲಿ: ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಬಂಧನ ವಿರೋಧಿಸಿ ಸ್ಥಳೀಯ ಭಾರತೀಯ ಜನತಾ ಪಕ್ಷ ಮುಖಂಡರು, ಕಾರ್ಯಕರ್ತರು, ಬಿಜೆಪಿ ವಿವಿಧ ಘಟಕಗಳ ಪದಾಧಿಕಾರಿಗಳು, ಬಿಜೆಪಿ ಚುನಾಯಿತ ಪ್ರತಿನಿಧಿಗಳು ಸೋಮವಾರ ಕರೆ ನೀಡಿದ್ದ ಪಟ್ಟಣ ಬಂದ್ ಯಶಸ್ವಿಯಾಯಿತು.
ಉದ್ಭವ ಮಹಾಗಣಪತಿ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ, ಗಂಗಾನಗರ, ಡಾ. ರಾಜ್ಕುಮಾರ್ ರಸ್ತೆ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡಿತು.
ಈ ಸಂದರ್ಭದಲ್ಲಿ ಮುಖಂಡರು ಸೋನಿಯಾಗಾಂಧಿ, ಪ್ರಧಾನಮಂತ್ರಿ, ಕೇಂದ್ರ ಗೃಹ ಮಂತ್ರಿ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಟೈರ್ಗಳಿಗೆ ಬೆಂಕಿ ಹಚ್ಚಿ ಸೋನಿಯಾ ಗಾಂಧಿ ಪ್ರತಿಕೃತಿ ದಹಿಸಿದರು.
ಉಪ ತಹಸೀಲ್ದಾರ ಶಿವರಾಜ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು. ಬಂದ್ ಅಂಗವಾಗಿ ಶಾಲಾ ಕಾಲೇಜ್ ರಜೆ ಘೋಷಿಸಲಾಗಿತ್ತು. ಅಂಗಡಿ ಮುಂಗಟ್ಟುಗಳು, ಚಿತ್ರಮಂದಿರ ಬಂದ್ ಆಗಿದ್ದವು. ಬಸ್ ಸಂಚಾರ ಸ್ಥಗಿತಗೊಂಡಿತ್ತು.
ಕಂಪ್ಲಿ ವಿಧಾನಸಭಾಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿ. ಲಿಂಗನಗೌಡ, ಪ್ರದಾನ ಕಾರ್ಯದರ್ಶಿ ಎನ್. ಮಲ್ಲಿಕಾರ್ಜುನ ರೆಡ್ಡಿ, ಬಿಜೆಪಿ ನಗರ ಘಟಕಾಧ್ಯಕ್ಷ ಎನ್. ಪುರುಷೋತ್ತಮ, ಪುರಸಭೆ ಅಧ್ಯಕ್ಷೆ ಹೇಮಾವತಿ ಎಚ್.ಪಿ. ಚಂದ್ರ, ಉಪಾಧ್ಯಕ್ಷ ಎಲೆಗಾರ ನಾಗರಾಜ, ಸ್ಥಾಯಿ ಸಮಿತಿ ಅಧ್ಯಕ್ಷ ಎನ್. ರಾಮಾಂಜನೇಯುಲು, ಮಾಜಿ ಅಧ್ಯಕ್ಷರಾದ ಪಿ. ಬ್ರಹ್ಮಯ್ಯ, ಟಿ. ಲಿಂಗಾರೆಡ್ಡಿ, ಸದಸ್ಯರಾದ ಜಿ.ಜಿ.
ಚಂದ್ರಣ್ಣ, ವಿ. ವಿದ್ಯಾಧರ, ಅಬ್ದುಲ್ರೌಫ್, ಯು. ರಾಮದಾಸ, ಸಣ್ಣ ಹುಲುಗಪ್ಪ, ಕೆ. ಸತೀಶ್, ಸುಲೋ ಚನಮ್ಮ, ವಿ. ರತ್ನಮ್ಮ, ಕೊಂಡಮ್ಮ, ಹನುಮಂತಮ್ಮ, ವಿ. ಶಂಕ್ರಮ್ಮ, ಆತ್ಮರಾಂ, ಟಿಡಿಬಿ ಮಾಜಿ ಅಧ್ಯಕ್ಷ ಕಟ್ಟೆ ಉಮಾಪತಿ, ಮಾಜಿ ಅಧ್ಯಕ್ಷ ಬಿ. ಸಿದ್ದಪ್ಪ, ಮಾಜಿ ಸದಸ್ಯ ಜಿ. ರಾಮಣ್ಣ, ತಾ.ಪಂ ಅಧ್ಯಕ್ಷ ಸಿ.ಡಿ. ಮಹಾದೇವ, ಸದಸ್ಯ ವೆಂಕಟರಾಮರಾಜು, ಉಮಾದೇವಿ, ಬಿಜೆಪಿ ಮುಖಂಡರಾದ ಟಿ. ಕೋಟಿ ರೆಡ್ಡಿ, ಅಗಳಿ ಪಂಪಾಪತಿ,
ಎನ್. ಚಂದ್ರಕಾಂತರೆಡ್ಡಿ, ಸಜ್ಜೇದ ಸಿದ್ಧ ಲಿಂಗಪ್ಪ, ಎ.ಸಿ. ದಾನಪ್ಪ, ಡಾ. ವೆಂಕಟೇಶ್, ಎಚ್. ಪೂರ್ಣಚಂದ್ರ, ವ್ಯ.ಉ.ಮಾ.ಸ ಸಂಘದ ಅಧ್ಯಕ್ಷ ಜಿ. ಪಂಪಾಪತಿ, ಎಪಿಎಂಸಿ ಉಪಾಧ್ಯಕ್ಷ ಎ. ವೀರೇಶಪ್ಪ, ಧನವಂತಪ್ಪ, ಭೂ ನ್ಯಾಯ ಮಂಡಳಿ ಸದಸ್ಯ ಕೆ. ಷಣ್ಮುಖಪ್ಪ, ಜಿ. ವೆಂಕಟೇಶಶೆಟ್ಟಿ, ಎಸ್. ನಂದೆಪ್ಪ, ಸಿ. ಯಂಕಪ್ಪ, ವಿ. ಗೋವಿಂದರಾಜ್, ಡಿ.ಎಚ್.ಎಂ. ರವೀಂದ್ರ, ಬಾವಿಕಟ್ಟೆ ದೇವೇಂದ್ರ,
ಎಸ್. ಪದ್ದಮ್ಮ, ಕೆ. ಜ್ಯೋತಿ, ಯಶೋದಮ್ಮ, ಸರಸ್ವತಮ್ಮ, ನಿರ್ಮಲಮ್ಮ, ಉಪ್ಪಾರು ಲಕ್ಷ್ಮಿದೇವಿ, ಡಿ. ವೀರಣ್ಣ, ರಾಜುಜೈನ್, ವಿ. ಭಾಸ್ಕರ ರೆಡ್ಡಿ, ಕಂಬತ್ತು ರಮೇಶ, ಬಾಗಲಿ ಮಂಜುನಾಥ, ವಿ. ವೆಂಕಟರಮಣ, ಕೈಲಾಸಪತಿ, ಪರಮೇಶ್, ಎಚ್.ಎಂ. ಉದಯ ಕುಮಾರ್, ಕೆ. ಮಲ್ಲಯ್ಯ, ಬಿಜೆಪಿ ವಿವಿಧ ಘಟಕಗಳ ಪದಾಧಿಕಾರಿ ಗಳು ಹಾಜರಿದ್ದರು.
ಕುರುಗೋಡು ವರದಿ
ಕುರುಗೋಡು: ಸಿಬಿಐ ಅಧಿಕಾರಿಗಳು ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿಯನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ಪಟ್ಟಣದಲ್ಲಿ ಮಂಗಳವಾರ ಬಿಜೆಪಿ ಕಾರ್ಯಕರ್ತರು ರಸ್ತೆತಡೆ ನಡೆಸಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ನಾಲ್ಕು ದಿಕ್ಕುಗಳಲ್ಲಿ ರಸ್ತೆ ಸಂಚಾರಕ್ಕೆ ತಡೆಯೊಡ್ಡಿ ಮುಖ್ಯ ವೃತ್ತದಲ್ಲಿ ಟೈರ್ಗಳಿಗೆ ಬೆಂಕಿಹಚ್ಚಿ ದ ಪ್ರತಿಭಟನಾನಿರತರು, ಆಂಧ್ರಪ್ರದೇಶ ಸರ್ಕಾರ, ಸಿಬಿಐ ಮತ್ತು ಕೇಂದ್ರದ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬ್ಯಾಂಕ್ಗಳು ಕಾರ್ಯ ನಿರ್ವಹಿಸಲಿಲ್ಲ. ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚದೆ ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿದರು. ಬಹುತೇಕ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ರಸ್ತೆ ತಡೆ ನಡೆಸಿದ ಸಂದರ್ಭದಲ್ಲಿ ಪಟ್ಟಣದಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗಬೇಕಾದ ಪ್ರಯಾಣಿಕರು ಪರದಾಡುವಂತಾಗಿತ್ತು.
ಪ್ರತಿಭಟನೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪ್ರಭೇಷನರಿ ಡಿವೈಎಸ್ಪಿ ಶಿವಕುಮಾರ್ ನೇತೃತ್ವದ ಪೊಲೀಸ್ ತಂಡ ಬಿಗಿ ಬಂದೋಬಸ್ತ್ ವ್ಯವಸ್ತೆ ಕೈಗೊಂಡಿತ್ತು.
ಎಮ್ಮಿಗನೂರು ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯ ವಿ.ಎರ್ರಿಸ್ವಾಮಿ, ಬಿಜೆಪಿ ಮುಖಂಡರಾದ ಜಿ. ಯುವ ರಾಜ, ಚಾನಾಳ್ ಆನಂದ, ಎಸ್. ಸದಾನಂದ ಗೌಡ, ಶ್ರೀನಿವಾಸ, ಶೇಷಗಿರಿ ರಾವು, ದೊಡ್ಡಬಸಪ್ಪ, ಸಣ್ಣತಿಪ್ಪಯ್ಯ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.